ADVERTISEMENT

ಸಹಪಾಠಿ ಸತ್ತರೆ ರಜೆ ಸಿಗುತ್ತದೆಂದು ಚೂರಿಯಿಂದ ಇರಿದ ಬಾಲಕಿ!

ಏಜೆನ್ಸೀಸ್
Published 18 ಜನವರಿ 2018, 13:24 IST
Last Updated 18 ಜನವರಿ 2018, 13:24 IST
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕ – ಚಿತ್ರ ಕೃಪೆ: ಎಎನ್ಐ ಸುದ್ದಿಸಂಸ್ಥೆ
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕ – ಚಿತ್ರ ಕೃಪೆ: ಎಎನ್ಐ ಸುದ್ದಿಸಂಸ್ಥೆ   

ಲಖನೌ: ಸಹಪಾಠಿ ಸತ್ತರೆ ಶಾಲೆಗೆ ರಜೆ ಸಿಗುತ್ತದೆಂದು ಭಾವಿಸಿದ ಬಾಲಕಿಯೊಬ್ಬಳು ಒಂದನೇ ತರಗತಿ ಬಾಲಕನ ಮೇಲೆ ಚೂರಿಯಿಂದ ಇರಿದಿದ್ದ ಘಟನೆ ಇಲ್ಲಿನ ಶಾಲೆಯೊಂದರಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

ಇಲ್ಲಿನ ತ್ರಿವೇಣಿ ನಗರದ ಬ್ರೈಟ್‌ಲ್ಯಾಂಡ್‌ ಶಾಲೆಯ ಶೌಚಾಲಯದಲ್ಲಿ ಇದೇ 16 ರಂದು ರಿತಿಕ್‌ ಎಂಬ ಆರು ವರ್ಷದ ಬಾಲಕನ ಮೇಲೆ ಇದೇ ಶಾಲೆಯ 11 ವರ್ಷದ ಬಾಲಕಿ ಚಾಕುವಿನಿಂದ ಇರಿದಿದ್ದಳು.

ಘಟನೆ ಸಂಬಂಧ ‘ನಿರ್ಲಕ್ಷ್ಯ ಮತ್ತು ಸಾಕ್ಷ್ಯಗಳನ್ನು ಬಚ್ಚಿಟ್ಟ ಆರೋಪದ ಮೇಲೆ ಮುಖ್ಯೋಪಾಧ್ಯಾಯರಾದ ರಚಿತ್‌ ಮಾನಸ್‌ ಅವರನ್ನು ಬಂಧಿಸಲಾಗಿದೆ. ಘಟನೆ ಕುರಿತು ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿಲ್ಲ’ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ದೀಪಕ್‌ ಕುಮಾರ್‌ ಹೇಳಿದ್ದಾರೆ.

ADVERTISEMENT

ಗಾಯಗೊಂಡ ಬಾಲಕ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದಿಂದ ಪಾರಾಗಿದ್ದಾನೆ.

‘ಯಾವುದಾದರೂ ವಿದ್ಯಾರ್ಥಿ ಶಾಲೆಯಲ್ಲಿ ಮೃತಪಟ್ಟರೆ ಶಾಲೆ ಆಡಳಿತ ಮಂಡಳಿ ರಜೆ ಕೊಡುತ್ತಾರೆ ಎಂದು ಕೆಲವರು ಬಾಲಕಿಗೆ ಹೇಳಿದ್ದಾರೆ. ಅದರಿಂದಲೇ ಆಕೆ ಚಾಕುವಿನಿಂದ ಬಾಲಕಿನಿಗೆ ಇರಿದಿದ್ದಾಳೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ’ ಎಂದು ಜಿಲ್ಲಾಧಿಕಾರಿ ಕೌಶಲ್ ರಾಜ್ ಶರ್ಮಾ ಹೇಳಿದ್ದಾರೆ. ಪ್ರಕರಣ ಸಂಬಂಧ ಎಫ್‌ಐಆರ್ ದಾಖಲಾಗಿದೆ.

‘ಬಾಲಕಿಯೊಬ್ಬಳು ಚಾಕುವಿನಿಂದ ದಾಳಿ ಮಾಡಿ ನನ್ನ ಮಗನಿಗೆ ಗಾಯವಾಗಿದೆ ಎಂದು ನನಗೆ ಶಾಲೆಯಿಂದ ತಿಳಿಸಿದರು’ ಎಂದು ರಿತಿಶ್‌ ತಂದೆ ರಾಜೇಶ್‌ ಬುಧವಾರ ಹೇಳಿದ್ದರು.

ಚೂರಿಯಿಂದ ಬಾಲಕನ ಇರಿತ ಘಟನೆ ನಡೆದ ಮರುದಿನ ಹಲವು ಪೋಷಕರು ಪ್ರಕರಣದ ಬಗ್ಗೆ ತಿಳಿದುಕೊಳ್ಳಲು ಶಾಲೆಗೆ ಧಾವಿಸಿಬಂದಿದ್ದರು. ಏನು ನಡೆದಿದೆ ಎಂಬ ಬಗ್ಗೆ ತಿಳಿಸುವಂತೆ ಅವರು ಒತ್ತಾಯಿಸಿದ್ದರು. ಇದರಿಂದ ಶಾಲಾ ಆವರಣದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಇದರಿಂದ ಪ್ರಕರಣ ಬೆಳಕಿಗೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.