ನವದೆಹಲಿ: ಲಾಭದಾಯಕ ಹುದ್ದೆ ಹೊಂದಿದ್ದಾರೆ ಎನ್ನಲಾಗಿರುವ ಆಮ್ ಆದ್ಮಿ ಪಕ್ಷದ 20 ಶಾಸಕರನ್ನು ಚುನಾವಣಾ ಆಯೋಗವು ಅನರ್ಹಗೊಳಿಸಿದೆ ಎಂದು ಟೈಮ್ಸ್ ನೌ ಸುದ್ದಿ ವಾಹಿನಿ ವರದಿ ಮಾಡಿದೆ.
ಆಯೋಗವು ಈ ಅನರ್ಹತೆ ಆದೇಶವನ್ನು ಅನುಮೋದಿಸಲು ರಾಷ್ಟ್ರಪತಿಗೆ ಪಟ್ಟಿ ಕಳುಹಿಸಿದೆ. ಇದರಿಂದ ದೆಹಲಿಯಲ್ಲಿ ಉಪಚುನಾವಣೆ ನಡೆಯುವ ಸಾಧ್ಯತೆಗಳು ದಟ್ಟವಾಗುತ್ತಿವೆ.
2015ರಲ್ಲಿ ದೆಹಲಿಯ ವಿಧಾನಸಭಾ ಚುನಾವಣೆಯಲ್ಲಿ ಎಎಪಿ 70 ಕ್ಷೇತ್ರಗಳಲ್ಲಿ 67ರಲ್ಲಿ ಅಭೂತಪೂರ್ವ ಗೆಲುವು ದಾಖಲಿಸಿತ್ತು. ಆ ಬಳಿಕ ಗೆದ್ದ ಪ್ರತಿನಿಧಿಗಳ ಮೇಲೆ ಬಿಜೆಪಿ ಆರೋಪಗಳನ್ನು ಮಾಡುತ್ತಲೇ ಬರುತ್ತಿತ್ತು.
ವಕೀಲ ಪ್ರಶಾಂತ್ ಪಟೇಲ್ ಎಂಬುವರು ಲಾಭದಾಯಕ ಹುದ್ದೆಗಳನ್ನು ಹೊಂದಿರುವ ಜನಪ್ರತಿನಿಧಿಗಳನ್ನು ಅನರ್ಹಗೊಳಿಸುವಂತೆ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದರು. ತಮ್ಮ ವಿರುದ್ಧ ಸಲ್ಲಿಸಿರುವ ಅರ್ಜಿಗಳನ್ನು ಕೈಬಿಡುವಂತೆ ಶಾಸಕರು ಆಯೋಗವನ್ನು 2017ರ ಜೂನ್ ತಿಂಗಳಲ್ಲಿ ಕೋರಿದ್ದರು. ಅವರ ಮನವಿಯನ್ನು ಆಯೋಗ ತಿರಸ್ಕರಿಸಿತ್ತು. ತಮ್ಮನ್ನು ಅನರ್ಹಗೊಳಿಸದಂತೆ ಶಾಸಕರು ದೆಹಲಿ ಹೈಕೋರ್ಟ್ನಲ್ಲಿ ಸಲ್ಲಿಸಿದ್ದ ಅರ್ಜಿಯೂ ಸಹ ತಿರಸ್ಕೃತಗೊಂಡಿತ್ತು.
ಕಾಂಗ್ರೆಸ್ ಸಹ ಈ ತಿಂಗಳ ಆರಂಭದಲ್ಲಿ ಲಾಭದಾಯಕ ಹುದ್ದೆಯಲ್ಲಿರುವ ಶಾಸಕರನ್ನು ಅನರ್ಹಗೊಳಿಸುವಂತೆ ಮುಖ್ಯ ಚುನಾವಣಾ ಆಯುಕ್ತ ಅಚಲ್ ಕುಮಾರ್ ಜ್ಯೋತಿ ಅವರನ್ನು ಒತ್ತಾಯಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.