ನವದೆಹಲಿ: ಲಾಭದಾಯಕ ಹುದ್ದೆ ನಿರ್ವಹಣೆಯ ಆರೋಪದಲ್ಲಿ ಪಕ್ಷದ 20 ಶಾಸಕರು ಅನರ್ಹಗೊಳ್ಳುವುದು ಸನ್ನಿಹಿತವಾಗುತ್ತಿರುವಂತೆಯೇ ತನ್ನ ವಿರುದ್ಧ ಆಕ್ರಮಣಕಾರಿಯಾಗಿ ಪ್ರಚಾರ ನಡೆಸುತ್ತಿರುವ ಕಾಂಗ್ರೆಸ್ ವಿರುದ್ಧ ಆಮ್ ಆದ್ಮಿ ಪಾರ್ಟಿ (ಎಎಪಿ) ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಬಿಜೆಪಿಯ ರಾಜಕೀಯ ತಂತ್ರ ಅರ್ಥಮಾಡಿಕೊಳ್ಳದೆ ಕಾಂಗ್ರೆಸ್ ಅತಿಯಾಗಿ ವರ್ತಿಸುತ್ತಿದೆ. ಬಿಜೆಪಿ ವಿರುದ್ಧ ಎಲ್ಲ ವಿರೋಧ ಪಕ್ಷಗಳು ಒಟ್ಟಾಗಿ ನಡೆಸಲು ಉದ್ದೇಶಿಸಿರುವ ಹೋರಾಟದ ಮೇಲೆ ಕಾಂಗ್ರೆಸ್ನ ಈ ವರ್ತನೆ ಪ್ರಭಾವ ಬೀರಲಿದೆ ಎಂದು ಎಎಪಿ ಎಚ್ಚರಿಕೆ ನೀಡಿದೆ.
ದೆಹಲಿಯಲ್ಲಿ ತನ್ನ ಭದ್ರನೆಲೆಯನ್ನೇ ಬಳಸಿಕೊಂಡು ಎಎಪಿ ಬೆಳೆದಿರುವುದರಿಂದ ಅದರೊಂದಿಗೆ ಹೊಂದಾಣಿಕೆ ಮಾಡುವುದಕ್ಕೆ ಯಾವುದೇ ಅರ್ಥ ಇಲ್ಲ ಎಂಬ ಭಾವನೆ ಕಾಂಗ್ರೆಸ್ ನಾಯಕರಲ್ಲಿದೆ.
ಶಾಸಕರ ಅನರ್ಹತೆ ವಿಚಾರದಲ್ಲಿ ತೃಣಮೂಲ ಕಾಂಗ್ರೆಸ್, ಸಿಪಿಎಂ ಮತ್ತು ಶರದ್ ಯಾದವ್ ನೇತೃತ್ವದ ಜೆಡಿಯು ಬಣ ಎಎಪಿಗೆ ಬೆಂಬಲ ವ್ಯಕ್ತಪಡಿಸಿದೆ. ಆದರೆ, ದೆಹಲಿ ಕಾಂಗ್ರೆಸ್ ಘಟಕವು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ರಾಜೀನಾಮೆಗೆ ಒತ್ತಾಯಿಸಿದೆ. ಕೇಜ್ರಿವಾಲ್ ನೇತೃತ್ವದ ಸರ್ಕಾರದ ವಿರುದ್ಧ ಸೋಮವಾರದಿಂದ ಪ್ರತಿಭಟನೆ ನಡೆಸುವುದಾಗಿಯೂ ಘೋಷಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.