ಧಾರವಾಡ: ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ನೀಡುವ `ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ'ಯನ್ನು ವಿಮರ್ಶಕ ಡಾ.ಎಚ್.ಎಸ್.ರಾಘವೇಂದ್ರರಾವ್ ಅವರಿಗೆ ಹಿರಿಯ ವಿಮರ್ಶಕ ಡಾ.ಜಿ.ಎಸ್.ಆಮೂರ ಗುರುವಾರ ಇಲ್ಲಿ ಪ್ರದಾನ ಮಾಡಿದರು.
ಬೇಂದ್ರೆ ಅವರ 118ನೇ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದ್ದು, ಪ್ರಶಸ್ತಿಯು ರೂ 1 ಲಕ್ಷ ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ.
`ಕನ್ನಡವು ಕನ್ನಡವ ಕನ್ನಡಿಸತಿರಬೇಕು ಎಂದು ಹೇಳಿದ ಬೇಂದ್ರೆ ಅವರು ನವೋದಯದ ಅಗತ್ಯವನ್ನು ಪ್ರತಿನಿತ್ಯ ತಮ್ಮ ಕವಿತೆಗಳಲ್ಲಿ ಕಾಣಿಸುತ್ತಿದ್ದರು. ಅಕ್ಷರಗಳ ಲೋಕದಲ್ಲಿ ಅನಕ್ಷರಸ್ಥರಿಗೆ ಅಸ್ತಿತ್ವ ಕೊಡಿಸಿದರು. ಹೊರಗಿನಿಂದ ಪಡೆದ ಮೌಲ್ಯಗಳನ್ನು ಒಳಗಡೆ ಅಳವಡಿಸಿಕೊಂಡರು' ಎಂದು ಪ್ರಶಸ್ತಿ ಸ್ವೀಕರಿಸಿದ ಡಾ.ರಾಘವೇಂದ್ರರಾವ್ ಹೇಳಿದರು.
`ಧಾರ್ಮಿಕ ಮೂಲಭೂತವಾದವನ್ನು ಎಂದಿಗೂ ಒಪ್ಪದ ಬೇಂದ್ರೆ, ಕನ್ನಡವೊಂದೇ ಕರ್ನಾಟಕವೊಂದೇ ಎಂಬ ಮಾತನ್ನೂ ಒಪ್ಪಲಿಲ್ಲ. ಈ ಮಾತು ಹಿಟ್ಲರ್ನ ಸಂಸ್ಕೃತಿ ಬಿಂಬಿಸುತ್ತದೆ ಎಂಬ ಉದ್ದೇಶದಿಂದ ಈ ಆಶಯವನ್ನು ತಿರಸ್ಕರಿಸಿ, ವಿಶ್ವಮಾನವ ಸಂದೇಶವನ್ನು ಒಪ್ಪಿಕೊಂಡಿದ್ದರು' ಎಂದು ವಿಶ್ಲೇಷಿಸಿದರು.
`ಹೊಸ ಪೀಳಿಗೆಯ ಸಾಹಿತ್ಯದ ವಿದ್ಯಾರ್ಥಿಗಳು ಬೇಂದ್ರೆ ಅವರ ಸಾಹಿತ್ಯ ಪರಂಪರೆಯನ್ನು ಮುಂದುವರೆಸಬೇಕು' ಎಂದು ಪ್ರಾಸ್ತಾವಿಕವಾಗಿ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ಡಾ.ಶ್ಯಾಮಸುಂದರ ಬಿದರಕುಂದಿ ಆಶಿಸಿದರು.
ಟ್ರಸ್ಟ್ನ ಸದಸ್ಯ ಕಾರ್ಯದರ್ಶಿ ಬಿ.ಡಿ.ಹಿರೇಗೌಡರ ಸ್ವಾಗತಿಸಿದರು. ವಿಮರ್ಶಕ ಡಾ.ಜಿ.ಎಸ್.ಆಮೂರ ಮಾತನಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.