ADVERTISEMENT

ಅರೆತಿಪ್ಪೂರು ಗೊಮ್ಮಟನಿಗೂ ಮಹಾಭಿಷೇಕ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2017, 19:30 IST
Last Updated 22 ನವೆಂಬರ್ 2017, 19:30 IST
ಮದ್ದೂರು ತಾಲ್ಲೂಕು ಅರೆತಿಪ್ಪೂರಿನ ಬೆಟ್ಟದ ಮೇಲೆ ಶಿಷ್ಯರ ಜೊತೆ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ
ಮದ್ದೂರು ತಾಲ್ಲೂಕು ಅರೆತಿಪ್ಪೂರಿನ ಬೆಟ್ಟದ ಮೇಲೆ ಶಿಷ್ಯರ ಜೊತೆ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ   

ಮಂಡ್ಯ: ಶ್ರವಣಬೆಳಗೊಳ ಮಹಾಮಸ್ತಕಾಭಿಷೇಕಕ್ಕೆ ಪೂರ್ವಭಾವಿಯಾಗಿ ಮದ್ದೂರು ತಾಲ್ಲೂಕು ಅರೆತಿಪ್ಪೂರು ಬೆಟ್ಟದ ಮೇಲೆ ಏಕಾಂಗಿಯಾಗಿ ನಿಂತಿರುವ 12 ಅಡಿ ಎತ್ತರದ ಗೊಮ್ಮಟ ಮೂರ್ತಿಗೆ ಮಹಾಭಿಷೇಕ ಡಿ. 1ರಿಂದ ಮೂರು ದಿನಗಳ ಕಾಲ ನಡೆಯಲಿದೆ.

ಈಗಾಗಲೇ ಶ್ರವಣಬೆಳಗೊಳಕ್ಕೆ ಜೈನಮುನಿಗಳು ಭೇಟಿ ನೀಡುತ್ತಿದ್ದು, ಅರೆತಿಪ್ಪೂರಿಗೂ ಭೇಟಿ ನೀಡಿ ಗೊಮ್ಮಟನ ದರ್ಶನ ಪಡೆಯುತ್ತಿದ್ದಾರೆ. ಬಾಹುಬಲಿ ದಿಗಂಬರ ತೀರ್ಥಕ್ಷೇತ್ರ ಟ್ರಸ್ಟ್‌ ಸದಸ್ಯರು ಮಹಾಭಿಷೇಕಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

ಅರೆತಿಪ್ಪೂರು ಕ್ಷೇತ್ರಕ್ಕೆ ಕಾಯಕಲ್ಪ ನೀಡಲು ಬೆಟ್ಟದ ಕೆಳಗೆ ಆಶ್ರಮವನ್ನು ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಸ್ಥಾಪಿಸಿದ್ದಾರೆ. ಸಿದ್ಧಾಂತ ಕೀರ್ತಿ ಸ್ವಾಮೀಜಿಯನ್ನು ಉಸ್ತುವಾರಿಯಾಗಿ ನೇಮಕ ಮಾಡಿದ್ದಾರೆ. ಶ್ರೀಗಳ ನೇತೃತ್ವದಲ್ಲಿ ಮೂರು ದಿನಗಳ ಕಾಲ ಮಹಾಭಿಷೇಕ ನೆರವೇರಲಿದೆ.

ADVERTISEMENT

‘ಶ್ರವಣಬೆಳಗೊಳ ಕ್ಷೇತ್ರ ಅರೆತಿಪ್ಪೂರಿನ ತದ್ರೂಪ. ಶ್ರವಣಬೆಳಗೊಳದ ಬಾಹುಬಲಿ ಮೂರ್ತಿ ಕ್ರಿ.ಶ 973ರಲ್ಲಿ ನಿರ್ಮಾಣಗೊಂಡಿದೆ. ಇಲ್ಲಿಯ ಮೂರ್ತಿ ಕ್ರಿ.ಶ 843ರಲ್ಲೇ ನಿರ್ಮಾಣಗೊಂಡಿದೆ. ಶ್ರವಣಬೆಳಗೊಳ ಮಹಾಮಸ್ತಕಾಭಿಷೇಕಕ್ಕೂ ಮೊದಲು ಅರೆತಿಪ್ಪೂರು ಬಾಹುಬಲಿ ಮೂರ್ತಿಗೆ ಅಭಿಷೇಕ ನೆರವೇರಿಸಲಾಗುವುದು’ ಎಂದು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

‘ಚೋಳ, ಹೊಯ್ಸಳ, ವಿಜಯನಗರ ಅರಸರ ಆಳ್ವಿಕೆಯಲ್ಲಿ ಅರೆತಿಪ್ಪೂರು ಗ್ರಾಮದ ಹೊರವಲಯದಲ್ಲಿರುವ ಚಿಕ್ಕಬೆಟ್ಟ, ದೊಡ್ಡಬೆಟ್ಟಗಳು ಜೈನರ ಪ್ರಮುಖ ಧಾರ್ಮಿಕ ಸ್ಥಳಗಳಾಗಿದ್ದವು. ಆದರೆ ಕ್ರಮೇಣ ಚಿಕ್ಕಬೆಟ್ಟದ ಮೇಲಿದ್ದ 12 ದೇವಾಲಯ ಶಿಥಿಲಗೊಂಡವು. ತೀರ್ಥಂಕರರ ಮೂರ್ತಿ
ಗಳು ಕುರೂ ಪವಾದವು. ಭಾರತೀಯ ಪುರಾತನ ಸರ್ವೇಕ್ಷಣಾ ಇಲಾಖೆ ಮರುಜೀವ ನೀಡಲು ಪ್ರಯತ್ನಿಸುತ್ತಿದ್ದು ಉತ್ಖನನ ನಡೆಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.