ಆಲಮಟ್ಟಿ (ವಿಜಾಪುರ)/ ಬೆಳಗಾವಿ/ ಮಂಡ್ಯ/ ಶಿವಮೊಗ್ಗ: ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಿಂದಾಗಿ ಆಲಮಟ್ಟಿ ಜಲಾಶಯ ಬಹುತೇಕ ಭರ್ತಿಯಾಗಿದ್ದು ಸೋಮವಾರ ಸಂಜೆಯಿಂದ 11 ಕ್ರೆಸ್ಟ್ಗೇಟ್ಗಳ ಮೂಲಕ ನದಿಗೆ ನೀರು ಬಿಡಲಾಗುತ್ತಿದೆ.
ಜಲಾಶಯದ ಗರಿಷ್ಠ ಮಟ್ಟ 519.60 ಮೀಟರ್ ಇದ್ದು 518.6 ಮೀಟರ್ವರೆಗೆ ನೀರು ಸಂಗ್ರಹಿಟ್ಟುಕೊಳ್ಳಲಾಗಿದೆ. ಒಳಹರಿವು 1.50 ಲಕ್ಷ ಕ್ಯೂಸೆಕ್ ಇದೆ. ಕ್ರೆಸ್ಟ್ಗೇಟ್ ಮೂಲಕ 50,000 ಕ್ಯೂಸೆಕ್ ಮತ್ತು ವಿದ್ಯುತ್ ಉತ್ಪಾದನೆಗೆ 42,000 ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಒಟ್ಟಾರೆ ನಾರಾಯಣಪುರ ಜಲಾಶಯಕ್ಕೆ 92,000 ಕ್ಯೂಸೆಕ್ ಹರಿದು ಹೋಗುತ್ತಿದೆ.
123 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಈಗ 106 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.
ಎಲ್ಲ ಘಟಕಗಳಿಂದ ಒಟ್ಟು 270 ಮೆ.ವಾ ವಿದ್ಯುತ್ ಉತ್ಪಾದಿಸಲಾಗುತ್ತಿದೆ ಎಂದು ಕೆಪಿಸಿಎಲ್ ಅಧಿಕಾರಿಗಳು ಹೇಳಿದ್ದಾರೆ.
ಪ್ರವಾಹ ಇಳಿಮುಖ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನಲ್ಲಿ ಕೃಷ್ಣಾ ಮತ್ತು ಉಪನದಿಗಳ ಒಳಹರಿವು ಕಡಿಮೆಯಾಗಿದ್ದು ಅಕ್ಕೋಳ– ಸಿದ್ನಾಳ ಹಾಗೂ ಕುನ್ನೂರ–ಭೋಜವಾಡಿ ನಡುವಿನ ಸೇತುವೆಗಳು ಸಂಚಾರಕ್ಕೆ ಮುಕ್ತಗೊಂಡಿವೆ. ಇನ್ನೂ ನಾಲ್ಕು ಸೇತುವೆಗಳು ಮುಳುಗಡೆ ಸ್ಥಿತಿಯಲ್ಲಿಯೇ ಇವೆ.
ಮಹಾರಾಷ್ಟ್ರದ ನದಿ ಜಲಾನಯನ ಪ್ರದೇಶಗಳಲ್ಲಿ ಮಳೆ ಪ್ರಮಾಣ ಸೋಮವಾರ ಮತ್ತೆ ಹೆಚ್ಚಾಗಿದೆ. ಕಳೆದ 24 ಗಂಟೆಗಳಲ್ಲಿ ಕೃಷ್ಣೆಯ ಉಗಮಸ್ಥಾನ ಮಹಾಬಳೇಶ್ವರದಲ್ಲಿ 96 ಮಿ.ಮೀ., ಕೊಯ್ನಾ–126 ಮಿ.ಮೀ., ನವಜಾ–280 ಮಿ.ಮೀ ಮಳೆ ಬಿದ್ದಿದೆ.
ಮುಂದುವರಿದ ಮಳೆ: ಖಾನಾಪುರ ತಾಲ್ಲೂಕಿನ ಕಣಕುಂಬಿ ಹಾಗೂ ಭೀಮಗಡ ಅರಣ್ಯ ಪ್ರದೇಶದಲ್ಲಿ ವರ್ಷಧಾರೆ ಮುಂದುವರೆದಿದೆ. ತಾಲ್ಲೂಕಿನ ಹೆಮ್ಮಡಗಾ- ತಳೇವಾಡಿ, ಕೊಂಗಳಾ- ನೇರಸಾ, ಪಾರವಾಡ- ಚಿಕಲೆ ಗ್ರಾಮಗಳ ನಡುವೆ ಇರುವ ಹಳ್ಳಗಳ ಮೇಲೆ ಮೂರ್ನಾಲ್ಕು ಅಡಿಗಳಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಇದರಿಂದ ಈ ಗ್ರಾಮಗಳ ಸಂಪರ್ಕ ಭಾಗಶಃ ಕಡಿತಗೊಂಡಿದೆ. ಪಟ್ಟಣದ ಹಳೆಯ ಸೇತುವೆಯ ಮೇಲೆ ನಾಲ್ಕು ಅಡಿಗಳಷ್ಟು ನೀರು ಹರಿಯುತ್ತಿದ್ದು, ಹಬ್ಬನಹಟ್ಟಿಯ ಆಂಜನೇಯ ದೇವಸ್ಥಾನ ಸೋಮವಾರವೂ ಜಲಾವೃತಗೊಂಡಿದೆ. ಕಳೆದ 24 ಗಂಟೆಗಳಲ್ಲಿ ಕಣಕುಂಬಿಯಲ್ಲಿ 57.4 ಮಿ.ಮೀ. ಮಳೆ ದಾಖಲಾಗಿದೆ.
ಜಮಖಂಡಿ ತಾಲ್ಲೂಕಿನ ಹಿಪ್ಪರಗಿ ಜಲಾಶಯಕ್ಕೆ 1.56 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು ಅಷ್ಟೇ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ. ಕೆಆರ್ಎಸ್: ಮಂಡ್ಯ ಜಿಲ್ಲೆಯ ಕೆಆರ್ಎಸ್ ಅಣೆಕಟ್ಟೆಯ ನೀರಿನ ಮಟ್ಟವು ಸೋಮವಾರ 113.35 ಅಡಿಗೆ ತಲುಪಿದ್ದು, ಕಳೆದ ೨೪ ಗಂಟೆಗಳ ಅವಧಿಯಲ್ಲಿ ಕೇವಲ ಒಂದು ಅಡಿ ನೀರು ಸಂಗ್ರಹವಾಗಿದೆ.
ಭಾನುವಾರ 20,965 ಸಾವಿರ ಕ್ಯೂಸೆಕ್ ಇದ್ದ ಒಳಹರಿವಿನ ಪ್ರಮಾಣವು ಸೋಮವಾರ 19,333 ಕ್ಯೂಸೆಕ್ಗೆ ಇಳಿದಿದೆ. ಹೊರಹರಿವು 12,973 ಕ್ಯೂಸೆಕ್ ಇದೆ. ಭದ್ರಾ ಜಲಾಶಯ: ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆ ಕ್ಷೀಣಿಸಿದೆ. ಭದ್ರಾ ಜಲಾಶಯದ ನೀರಿನಮಟ್ಟ 171.90 ಅಡಿಗೆ ಏರಿದ್ದು, ಒಳ ಹರಿವು 16,259 ಕ್ಯೂಸೆಕ್ಗೆ ಇಳಿದಿದೆ. ಜಲಾಶಯ ಭರ್ತಿಯಾಗಲು ಇನ್ನೂ 14.10 ಅಡಿ ನೀರು ಸಂಗ್ರಹ ವಾಗಬೇಕಿದೆ.
ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 1787.5 ಅಡಿಗೆ ಏರಿಕೆಯಾಗಿದ್ದು, ಒಳ ಹರಿವು 25,406 ಕ್ಯೂಸೆಕ್ಗೆ ಕುಸಿದಿದೆ. ಜಿಲ್ಲೆಯ ವಿವಿಧ ಕಡೆ ಜಲಾವೃತಗೊಂಡಿದ್ದ ಗ್ರಾಮ ಹಾಗೂ ಗದ್ದೆಗಳಲ್ಲಿ ನೀರು ಗಣನೀಯವಾಗಿ ಇಳಿದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.