ಮಂಗಳೂರು: ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ ತಾಯಿಯನ್ನು ನೋಡಿಕೊಳ್ಳಲು ಬಂದಿದ್ದ ಬಾಲಕನೊಬ್ಬನಿಗೆ ಆಸ್ಪತ್ರೆಯ ಭದ್ರತಾ ಸಿಬ್ಬಂದಿಯೊಬ್ಬ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದ್ದು, ಆತನನ್ನು ಮಂಗಳೂರು ಪೂರ್ವ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಬಂಟ್ವಾಳ ತಾಲ್ಲೂಕಿನ ಗೋಳ್ತಮಜಲು ನಿವಾಸಿಯಾಗಿರುವ ಭದ್ರತಾ ಸಿಬ್ಬಂದಿ ಸೀತಾರಾಮ ಶೆಟ್ಟಿ (35) ಬಂಧಿತ ಆರೋಪಿ. ನಗರದ ಹೊರವಲಯದ ನಿವಾಸಿಯಾದ ಮಹಿಳೆಯೊಬ್ಬರು ಅಪಘಾತದಲ್ಲಿ ಗಾಯಗೊಂಡಿದ್ದರು. ಕೆಲವು ದಿನಗಳ ಹಿಂದೆ ಚಿಕಿತ್ಸೆಗಾಗಿ ನಗರದ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದರು. ಗಾಯಾಳು ಮಹಿಳೆಯ ಅಪ್ರಾಪ್ತ ವಯಸ್ಸಿನ ಮಗ ತಾಯಿಯನ್ನು ನೋಡಿಕೊಳ್ಳಲು ಮಂಗಳವಾರ ಆಸ್ಪತ್ರೆಗೆ ಬಂದಿದ್ದ.
‘ರೋಗಿಯ ಜೊತೆ ಇರುವವರಿಗೆ ಮಲಗಲು ಆಸ್ಪತ್ರೆಯಲ್ಲಿ ಯಾವುದೇ ಸೌಲಭ್ಯ ಇರಲಿಲ್ಲ. ಇದನ್ನು ಗಮನಿಸಿದ ಸೀತಾರಾಮ ಶೆಟ್ಟಿ, ಆಸ್ಪತ್ರೆಯ ಹಾಸಿಗೆ ಮತ್ತು ಹೊದಿಕೆಗಳನ್ನು ಇರಿಸುವ ಉಗ್ರಾಣದಲ್ಲಿ ಬಾಲಕನಿಗೆ ಮಲಗಲು ವ್ಯವಸ್ಥೆ ಮಾಡುವುದಾಗಿ ತಿಳಿಸಿ ಕರೆದೊಯ್ದಿದ್ದ. ಒಮ್ಮೆ ಬಾಲಕನನ್ನು ಉಗ್ರಾಣದಲ್ಲಿ ಬಿಟ್ಟು ಬಂದಿದ್ದ ಆತ, ರಾತ್ರಿ ಪುನಃ ಅಲ್ಲಿಗೆ ಹೋಗಿದ್ದ. ಆಗ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ್ದ. ಬೆಳಿಗ್ಗೆ ಸಂತ್ರಸ್ತ ಬಾಲಕ ಕೆಲವರ ಬಳಿ ಈ ವಿಷಯ ಹೇಳಿಕೊಂಡಿದ್ದ. ಆಗ ನಾಪತ್ತೆಯಾಗಿದ್ದ ಆರೋಪಿ, ಮಂಗಳವಾರ ಸಂಜೆಯವರೆಗೂ ಕೆಲಸಕ್ಕೆ ಬಂದಿರಲಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.
ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದ ಬಾಲಕ, ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದ. ಪೊಲೀಸರು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದರು. ಪೂರ್ವ ಠಾಣೆ ಇನ್ಸ್ಪೆಕ್ಟರ್ ಮಾರುತಿ ಜಿ.ನಾಯಕ್ ನೇತೃತ್ವದ ತಂಡ ಬುಧವಾರ ಆರೋಪಿಯನ್ನು ಬಂಧಿಸಿದೆ ಎಂದು ಪೊಲೀಸ್ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.