ADVERTISEMENT

ಇಬ್ಬರು ಹೆಣ್ಣುಮಕ್ಕಳನ್ನು ಹತ್ಯೆ ಮಾಡಿ, ಆತ್ಮಹತ್ಯೆಗೆ ಯತ್ನಿಸಿದ ತಂದೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2017, 19:30 IST
Last Updated 11 ಅಕ್ಟೋಬರ್ 2017, 19:30 IST

ರಾಮದುರ್ಗ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಮುದೇನೂರು ಗ್ರಾಮದ ಸಿದ್ದಪ್ಪ ಧೂಳಪ್ಪ ಕುಳ್ಳೂರ ಎಂಬುವರು ಮಂಗಳವಾರ ರಾತ್ರಿ ತಮ್ಮ ಇಬ್ಬರು ಹೆಣ್ಣು ಮಕ್ಕಳ ಕತ್ತು ಕೊಯ್ದು ಹತ್ಯೆ ಮಾಡಿ, ನಂತರ ತಾವೂ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಪವಿತ್ರಾ (8) ಹಾಗೂ ಪ್ರಿಯಾಂಕಾ (6) ಸತ್ತ ಮಕ್ಕಳು. ತೀವ್ರ ಗಾಯಗೊಂಡಿದ್ದ ಸಿದ್ದಪ್ಪ ಅವರನ್ನು ಬಾಗಲಕೋಟೆ ಆಸ್ಪತ್ರೆಗೆ ಸೇರಿಸಲಾಗಿದೆ.

ಊರಿಗೆ ಸಮೀಪದ ಮುಳ್ಳೂರು ಕಣಿವೆಯ ನಿರ್ಜನ ಪ್ರದೇಶಕ್ಕೆ ರಾತ್ರಿ ಮಕ್ಕಳನ್ನು ಕರೆದೊಯ್ದು ತಿಂಡಿಯಲ್ಲಿ ಕೀಟನಾಶಕ ಬೆರೆಸಿ ತಿನ್ನಿಸಿದ್ದಾರೆ. ಆ ಮೇಲೆ ಕುಡುಗೋಲಿನಿಂದ ಅವರನ್ನು ಹತ್ಯೆ ಮಾಡಿದ್ದು, ನಂತರ ಅದೇ ಕುಡುಗೋಲಿನಿಂದ ತನ್ನ ಕುತ್ತಿಗೆಯನ್ನೂ ಕೊಯ್ದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

‘ನನಗೆ ಹೃದಯ ಸಂಬಂಧಿ ಕಾಯಿಲೆ ಇದೆ. ಚಿಕಿತ್ಸೆಗೆ ಸಿಕ್ಕಾಪಟ್ಟೆ ಖರ್ಚು ಮಾಡಬೇಕಾಗುತ್ತದೆ. ಖರ್ಚು ಮಾಡಿದರೂ ಬದುಕುಳಿಯುವ ಗ್ಯಾರಂಟಿ ಇಲ್ಲ. ನಾನು ಸತ್ತರೆ ಮಕ್ಕಳ ಗತಿ ಏನು? ಅದಕ್ಕೆ ಎಲ್ಲರೂ ಒಟ್ಟಾಗಿ ಸಾಯುತ್ತಿದ್ದೇವೆ’ ಎಂದು ಸಿದ್ದಪ್ಪ ಘಟನೆಗೂ ಮುನ್ನ ಬರೆದಿಟ್ಟಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಸಿದ್ದಪ್ಪ ಅವರ ಪತ್ನಿ ಗೀತಾ ಇಬ್ಬರು ಗಂಡು ಮಕ್ಕಳನ್ನು ಕರೆದುಕೊಂಡು ಬಾದಾಮಿಯಲ್ಲಿನ ತವರು ಮನೆಗೆ ಹೋಗಿದ್ದರು. ರಾತ್ರಿ 11 ಗಂಟೆಗೆ ಹೆಂಡತಿಗೆ ಫೋನ್‌ ಮಾಡಿ, ‘ಬಸ್‌ನಲ್ಲಿ ಬರುತ್ತಿದ್ದಾಗ ಅಪಘಾತವಾಗಿದೆ. ಇಬ್ಬರೂ ಹೆಣ್ಣು ಮಕ್ಕಳು ಸತ್ತಿದ್ದಾರೆ. ನಾನೂ ಬದುಕುಳಿಯುವ ಸಾಧ್ಯತೆ ಕಡಿಮೆ. ಗಂಡು ಮಕ್ಕಳನ್ನು ಚೆನ್ನಾಗಿ ನೋಡಿಕೊ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.