ADVERTISEMENT

ಉಪ ಚುನಾವಣೆ: ಬಳ್ಳಾರಿ, ಚಿಕ್ಕೋಡಿ ಕೈ, ಶಿಕಾರಿಪುರ ಕಮಲ ಗೆಲುವು

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2014, 14:33 IST
Last Updated 25 ಆಗಸ್ಟ್ 2014, 14:33 IST
ಬಿ.ವೈ. ರಾಘವೇಂದ್ರ, ಎನ್.ವೈ. ಗೋಪಾಲಕೃಷ್ಣ, ಗಣೇಶ್‌ ಪ್ರಕಾಶ್‌ ಹುಕ್ಕೇರಿ
ಬಿ.ವೈ. ರಾಘವೇಂದ್ರ, ಎನ್.ವೈ. ಗೋಪಾಲಕೃಷ್ಣ, ಗಣೇಶ್‌ ಪ್ರಕಾಶ್‌ ಹುಕ್ಕೇರಿ   

ಬೆಂಗಳೂರು: ಮೂರು ವಿಧಾನ­ಸಭಾ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು, ಶಿಕಾರಿಪುರದಲ್ಲಿ ಬಿಜೆಪಿ, ಬಳ್ಳಾರಿ ಮತ್ತು ಚಿಕ್ಕೋಡಿ–ಸದಲಗ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿವೆ. ಗಣಿ ಮಣ್ಣಿನಲ್ಲಿ ಕಾಂಗ್ರೆಸ್ ಮೈಕೊಡವಿ ಮೇಲೆದ್ದಿದ್ದು, ಮಲೆನಾಡಿನ ಸೆರಗಿನಲ್ಲಿ ಕಮಲ ಪ್ರಯಾಸದ ನಗೆ ಬೀರಿದೆ.

ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ  ಕಾಂಗ್ರೆಸ್ ಅಭ್ಯರ್ಥಿ ಎನ್.ವೈ. ಗೋಪಾಲಕೃಷ್ಣ ಅವರು ಬಿಜೆಪಿ ಅಭ್ಯರ್ಥಿ ಓಬಳೇಶ್ ವಿರುದ್ಧ 33,104ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಕ್ಷೇತ್ರದಲ್ಲಿ ಮಾಜಿ ಮುಖ್ಯಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರು ಕಾಂಗ್ರೆಸ್‌ನ ಎಚ್.ಎಸ್. ಶಾಂತವೀರಪ್ಪಗೌಡ ವಿರುದ್ಧ 6430 ಮತಗಳ ಕಡಿಮೆ ಅಂತರದ ಪ್ರಯಾಸದ ಗೆಲುವು ಪಡೆದಿದ್ದಾರೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಕ್ಷೇತ್ರದಲ್ಲಿ  ಕಾಂಗ್ರೆಸ್ ಅಭ್ಯರ್ಥಿ ಗಣೇಶ್ ಪ್ರಕಾಶ್ ಹುಕ್ಕೇರಿ ಅವರು 31820 ಮತಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದ್ದಾರೆ.

ಬಳ್ಳಾರಿಯಲ್ಲಿ  ಕಾಂಗ್ರೆಸ್ ನ ಎನ್.ವೈ. ಗೋಪಾಲಕೃಷ್ಣ ಅವರು 83899 ಮತ ಗಳಿಸಿದ್ದು, ಬಿಜೆಪಿ ಅಭ್ಯರ್ಥಿ ಓಬಳೇಶ್ ಅವರು 50795 ಮತ ಗಳಿಸಿದ್ದಾರೆ.

ಶಿಕಾರಿಪುರದಲ್ಲಿ ಬಿಜೆಪಿಯ ಬಿ.ವೈ. ರಾಘವೇಂದ್ರ ಅವರು 71547 ಮತ ಗಳಿಸಿದ್ದು, ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಎಚ್. ಎಸ್. ಶಾಂತವೀರಪ್ಪ ಗೌಡ ಅವರು 65117 ಮತ ಗಳಿಸಿದ್ದು, ಬಿಜೆಪಿಗೆ ತೀವ್ರ ಪೈಪೋಟಿ ನೀಡಿದ್ದಾರೆ.

ಚಿಕ್ಕೋಡಿಯಲ್ಲಿ ಕಾಂಗ್ರೆಸ್ ನ ಗಣೇಶ ಪ್ರಕಾಶ ಹುಕ್ಕೇರಿ ಅವರು 94636 ಮತ ಗಳಿಸಿದ್ದು, ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಮಹಾಂತೇಶ್ ಕವಟಗಿಮಠ ಅವರು 62816 ಮತ ಗಳಿಸಿದ್ದಾರೆ ಎಂದು ಮುಖ್ಯ ಚುನಾವಣಾ ಅಧಿಕಾರಿ ಅನಿಲ್ ಕುಮಾರ್ ಝಾ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.