ADVERTISEMENT

ಎಚ್ಚರ, ಅಪಾಯದಲ್ಲಿವೆ ಹೃದಯಗಳು...!

ಹೃದ್ರೋಗದಿಂದ ಹೆಚ್ಚುತ್ತಿರುವ ಸಾವಿನ ಸಂಖ್ಯೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2017, 19:30 IST
Last Updated 20 ಜನವರಿ 2017, 19:30 IST
ಎಚ್ಚರ, ಅಪಾಯದಲ್ಲಿವೆ ಹೃದಯಗಳು...!
ಎಚ್ಚರ, ಅಪಾಯದಲ್ಲಿವೆ ಹೃದಯಗಳು...!   

ಬೆಂಗಳೂರು: ಹೃದ್ರೋಗ, ಶ್ವಾಸಕೋಶ ಮತ್ತು ರಕ್ತಪರಿಚಲನಕ್ಕೆ  ಸಂಬಂಧಿಸಿದ ಕಾಯಿಲೆಗಳು ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಬಲಿ ತೆಗೆದುಕೊಳ್ಳುತ್ತಿವೆ.ಬದಲಾದ ಜೀವನ ಶೈಲಿ, ಆಹಾರ ಪದ್ಧತಿ, ವ್ಯಾಯಾಮದ ಕೊರತೆ ಅತಿ ಬೇಗನೇ ಹೃದ್ರೋಗದ ಅಪಾಯಕ್ಕೆ ಆಹ್ವಾನ ನೀಡುತ್ತಿರುವುದು ಭಾರತ ಕೇಂದ್ರ ಸರ್ಕಾರದ ‘ಮೆಡಿಕಲ್‌ ಸರ್ಟಿಫಿಕೇಷನ್‌ ಆಫ್‌ ಕಾಸಸ್‌ ಆಫ್‌ ಡೆತ್‌’ (ಎಂಸಿಸಿಡಿ) 2014 ವರದಿ ಬಹಿರಂಗಪಡಿಸಿದೆ.

ಹೃದ್ರೋಗ ಎಲ್ಲ ವಯೋಮಾನದವರನ್ನೂ ಕಾಡುತ್ತಿದೆ. ಇದಕ್ಕೆ ಮತ್ತೊಂದು ಬಹುಮುಖ್ಯ ಕಾರಣವೆಂದರೆ, ಮಾನವನ ವಂಶವಾಹಿಯಲ್ಲಿ ಅಚಾನಕ್‌ ಮಾರ್ಪಾಡು ಆಗಿರುವುದು. ಇದರಿಂದ ಕೊಲೆಸ್ಟ್ರಾಲ್‌ ಮಟ್ಟ  ಹೆಚ್ಚುತ್ತಿದೆ. ಆಸ್ಪತ್ರೆ ಮತ್ತು ನರ್ಸಿಂಗ್‌ ಹೋಮ್‌ಗಳಲ್ಲಿ ಲಭ್ಯವಿರುವ ಮಾಹಿತಿ ಆಧರಿಸಿ ಈ ವರದಿ ತಯಾರಿಸಲಾಗಿದೆ.ಆಸ್ಪತ್ರೆಗೆ ದಾಖಲಾಗದೆ ವಿವಿಧ ರೀತಿಯ ಕಾಯಿಲೆಗಳಿಂದ ಸತ್ತವರ ಸಂಖ್ಯೆ ವರದಿಯಲ್ಲಿ ನಮೂದಾಗದೆ ಇರುವುದರಿಂದ ಅಂಕಿ–ಅಂಶದಲ್ಲಿ ವ್ಯತ್ಯಾಸ ಇರಬಹುದು.

ಮರಣ ಪ್ರಮಾಣ ಪತ್ರ
ಮರಣ ಪ್ರಮಾಣ ಪತ್ರವನ್ನು ಪಡೆಯುವವರ ಸಂಖ್ಯೆಯು  ವರ್ಷದಿಂದ ವರ್ಷಕ್ಕೆ  ಹೆಚ್ಚುತ್ತಿದೆ. ರಾಜ್ಯದಲ್ಲಿ 2014ರಲ್ಲಿ ಸಾವನ್ನಪ್ಪಿದವರ ಒಟ್ಟು ಸಂಖ್ಯೆ  4,11,533.  ಮರಣ ಪ್ರಮಾಣ ಪತ್ರ ಪಡೆದ ಸಂಖ್ಯೆ 1,46, 286

ಜೀವನ ಶೈಲಿ, ಆಹಾರ ಪದ್ಧತಿ ಕಾರಣ
ಹೃದ್ರೋಗ, ರಕ್ತಪರಿಚಲನೆ ಮತ್ತು ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ಹೆಚ್ಚಿಗೆ ಸಾವು ಸಂಭವಿಸಲು ಬದಲಾದ ಆಹಾರ ಪದ್ಧತಿ,  ಜೀವನ ಶೈಲಿ, ಮದ್ಯಪಾನ, ಮುಖ್ಯ ಕಾರಣ. ಶೇ 50 ರಷ್ಟು ಜನ ವ್ಯಾಯಾಮ, ನಡಿಗೆಯಂತಹ ದೈಹಿಕ ಚಟುವಟಿಕೆಗಳಿಂದ ವಿಮುಖರಾಗಿದ್ದಾರೆ ಎನ್ನುತ್ತಾರೆ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಎನ್‌. ಸಿ. ಮಂಜುನಾಥ್‌. ಅಲ್ಲದೆ, ಭಾರತೀಯರ ವಂಶವಾಹಿಯಲ್ಲಿ ಬದಲಾವಣೆಗಳಾಗಿ, ಕೊಲೆಸ್ಟ್ರಾಲ್‌ ಪ್ರಮಾಣ ಹೆಚ್ಚಾಗುತ್ತಿದೆ. ಹೃದ್ರೋಗವು 40 ವರ್ಷ ವಯಸ್ಸಿಗಿಂತ ಕೆಳಗಿನವರಲ್ಲೇ ಹೆಚ್ಚುತ್ತಿದೆ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.