ADVERTISEMENT

ಎರಡನೇ ದಿನವೂ ದಾಖಲೆ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2017, 19:30 IST
Last Updated 27 ಏಪ್ರಿಲ್ 2017, 19:30 IST
ಎರಡನೇ ದಿನವೂ ದಾಖಲೆ ಪರಿಶೀಲನೆ
ಎರಡನೇ ದಿನವೂ ದಾಖಲೆ ಪರಿಶೀಲನೆ   

ಕುಶಾಲನಗರ (ಕೊಡಗು ಜಿಲ್ಲೆ): ಸೋಮವಾರಪೇಟೆ ತಾಲ್ಲೂಕು ಕುಶಾಲನಗರದ ಎಸ್ಎಲ್ಎನ್ (ಶ್ರೀಲಕ್ಷ್ಮಿ ನಾರಾಯಣ) ಸಂಸ್ಥೆ ಕಚೇರಿಗಳ ಮೇಲೆ ದಾಳಿ ಮಾಡಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ಎರಡನೇ ದಿನವಾದ ಗುರುವಾರವೂ ದಾಖಲೆ ಪರಿಶೀಲನೆ ನಡೆಸಿದರು.

ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಸಂಬಂಧಿ, ಎಸ್ಎಲ್ಎನ್ ಸಂಸ್ಥೆಯ ಮಾಲೀಕ ವಿಶ್ವನಾಥನ್ ಮತ್ತು ಸಾಥಪನ್ ಅವರ ಮನೆಯಲ್ಲೇ ವಾಸ್ತವ್ಯ ಹೂಡಿರುವ ಐಟಿ ಅಧಿಕಾರಿಗಳು, ತನಿಖಾ ಕಾರ್ಯ ಚುರುಕುಗೊಳಿಸಿದ್ದಾರೆ.

ಸಂಸ್ಥೆಗೆ ಸೇರಿದ ಕೂಡ್ಲೂರು ಕೈಗಾರಿಕಾ ಬಡಾವಣೆಯ ಕಾಫಿ ಸಂಸ್ಕರಣಾ ಘಟಕ, ಕಾಫಿ ಕ್ಯೂರಿಂಗ್ ವರ್ಕ್ಸ್, ಬೊಳ್ಳೂರಿನ ಪರ್ಪಲ್ ಪಾಮ್ಸ್ ರೆಸಾರ್ಟ್, ತೆಪ್ಪದಗಂಡಿಯ ಈಡನ್ ಗಾರ್ಡನ್ ಲೇಔಟ್ ಸೇರಿ ಸಂಸ್ಥೆಯ ಕಚೇರಿಗಳಿಗೆ ಭೇಟಿ ನೀಡಿ, ದಾಖಲೆ ಸಂಗ್ರಹಿಸಿದರು.

ADVERTISEMENT

ಬ್ಯಾಂಕ್‌ ಖಾತೆ ಮುಟ್ಟುಗೋಲು: ಬುಧವಾರ ಬೆಳಿಗ್ಗೆ 8 ಗಂಟೆಗೆ ಎಸ್ಎಲ್ಎನ್ ಸಂಸ್ಥೆಯ ಕಚೇರಿ ಪ್ರವೇಶಿಸಿರುವ ಅಧಿಕಾರಿಗಳು ಗುರುವಾರ ಸಂಜೆಯವರೆಗೂ ಅಲ್ಲಿಯೇ ಇದ್ದರು. ಸಂಸ್ಥೆಯ ಬ್ಯಾಂಕ್ ವಾಹಿವಾಟು ದಾಖಲೆ ಪರಿಶೀಲಿಸಿ, ಕುಶಾಲನಗರದ ಕೆಲ ಬ್ಯಾಂಕ್‌ ಶಾಖೆಗಳಲ್ಲಿನ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿವಿಧೆಡೆ ದಾಳಿ ನಡೆಸಿರುವ ಅಧಿಕಾರಿಗಳು ಒಂದೇ ತಂಡದಲ್ಲಿ ಇರದಂತೆ ಬದಲಾವಣೆ ಮಾಡಲಾಗುತ್ತಿದೆ. ಹಿರಿಯ ಅಧಿಕಾರಿಗಳು ಶೋಧನಾ ಕಾರ್ಯದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ಬುಧವಾರ ರಾತ್ರಿ ಕೆಲವು ಅಧಿಕಾರಿಗಳು ವಿಶ್ವನಾಥನ್ ಮನೆಯಲ್ಲಿಯೇ ವಾಸ್ತವ್ಯ ಹೂಡಿದರು. ಹೊರಗಿನಿಂದ ಊಟ, ತಿಂಡಿ ತರಿಸಿಕೊಂಡರು. ಉಳಿದ ಸಿಬ್ಬಂದಿ ಕುಶಾಲನಗರದ ಖಾಸಗಿ ವಸತಿಗೃಹದಲ್ಲಿ ತಂಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.