ಬೆಂಗಳೂರು: ಅನರ್ಹಗೊಂಡಿರುವ ಏಳು ಬಂಡಾಯ ಶಾಸಕರಿಗೆ ರಾಜ್ಯಸಭೆ ಚುನಾವಣೆಯಲ್ಲಿ ಮತದಾನದ ಹಕ್ಕು ನೀಡದಂತೆ ಕೋರಿ ಜೆಡಿಎಸ್ ಶಾಸಕರಾದ ಸಿ.ಎನ್.ಬಾಲಕೃಷ್ಣ ಹಾಗೂ ಬಿ.ಬಿ.ನಿಂಗಯ್ಯ ಸಲ್ಲಿಸಿರುವ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ಕೈಗೆತ್ತಿಕೊಂಡಿದ್ದು ಬುಧವಾರ ಆದೇಶ ಪ್ರಕಟಿಸುವಂತೆ ಸೂಚಿಸಿದೆ.
ನ್ಯಾಯಮೂರ್ತಿ ರಾಘವೇಂದ್ರ ಎಸ್ ಚೌಹಾಣ್ ಅವರಯ ಸಿ .ಎನ್.ಬಾಲಕೃಷ್ಣ ಹಾಗೂ ಬಿ.ಬಿ.ನಿಂಗಯ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದರು.
ಶಾಸಕರಾದ ಜಮೀರ್ ಅಹ್ಮದ್, ಚೆಲುವರಾಯಸ್ವಾಮಿ, ಅಖಂಡ ಶ್ರೀನಿವಾಸಮೂರ್ತಿ, ರಮೇಶ್ ಬಂಡಿ ಸಿದ್ದೇಗೌಡ, ಇಕ್ಬಾಲ್ ಅನ್ಸಾರಿ, ಭೀಮನಾಯ್ಕ, ಎಚ್.ಸಿ.ಬಾಲಕೃಷ್ಣ ಅವರಿಗೆ ಮತದಾನದ ಹಕ್ಕು ನೀಡಬಾರದೆಂದು ಅರ್ಜಿದಾರರು ಕೋರಿದ್ದಾರೆ.
‘ಮಾ.23ಕ್ಕೆ ರಾಜ್ಯಸಭೆ ಚುನಾವಣೆ ನಡೆಯುತ್ತಿದ್ದು, ಪ್ರತಿವಾದಿಗಳು ತಮ್ಮ ಮತ ಚಲಾಯಿಸಬೇಕಿದೆ. ಇದು ರಾಜಕೀಯ ಮೇಲಾಟದ ಪ್ರಶ್ನೆಯಲ್ಲ. ಕನ್ನಡಿಗರ ಹಿತಾಸಕ್ತಿ ಒಳಗೊಂಡ ವಿಚಾರ. ರಾಜ್ಯಸಭೆಗೆ ಇಲ್ಲಿಂದ ಆಯ್ಕೆಗೊಂಡು ಹೋಗುವವರು ಕನ್ನಡಿಗರ ಘನತೆ ಹಾಗೂ ಹಿತಾಸಕ್ತಿ ಎತ್ತಿ ಹಿಡಿಯುವವರಾಗಿರುತ್ತಾರೆ. ಸ್ಪೀಕರ್ ತಮ್ಮ ಆದೇಶ ಕಾಯ್ದಿರಿಸಿಕೊಳ್ಳುವುದರಲ್ಲಿ ಏನೂ ಅರ್ಥವಿಲ್ಲ. ’ ಎಂದು ನ್ಯಾಯಪೀಠ ತಿಳಿಸಿತು.
‘ಸ್ಪೀಕರ್ ಏನು ಬೇಕಾದರೂ ತೀರ್ಮಾನ ಕೈಗೊಳ್ಳಲಿ. ಅದು ಅವರ ವಿವೇಚನೆಗೆ ಬಿಟ್ಟ ವಿಚಾರ. ವಾಸ್ತವದಲ್ಲಿ ಸ್ಪೀಕರ್ ಇಂದೇ ಆದೇಶ ಪ್ರಕಟಿಸಬೇಕಿತ್ತು. ಈ ರಾಜಕೀಯ ಸಂಘರ್ಷವನ್ನು ಮುಂದುವರಿಸಿಕೊಂಡು ಹೋಗುವುದರಲ್ಲಿ ಯಾವುದೇ ಸಫಲತೆ ಕಂಡು ಬರುವುದಿಲ್ಲ. ಒಂದು ವೇಳೆ ನನ್ನ ಆದೇಶವನ್ನು ಬೇಕಾದರೆ ಮೇಲಿನ ಕೋರ್ಟ್ನಲ್ಲಿ ಪ್ರಶ್ನಿಸಿಕೊಳ್ಳಿ’ ಎಂದು ತಿಳಿಸಿತು.
ಈ ಕುರಿತು ಬುಧವಾರ ಬೆಳಗ್ಗೆ ಆದೇಶ ಹೊರಡಿಸುವ ಬಗ್ಗೆ ಕೋರ್ಟ್ಗೆ ತಿಳಿಸುವಂತೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್.ಪೊನ್ನಣ್ಣ ಅವರಿಗೆ ಸೂಚಿಸಿ, ನ್ಯಾಯಪೀಠ ವಿಚಾರಣೆಯನ್ನು ಮಧ್ಯಾಹ್ನಕ್ಕೆ ಮುಂದೂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.