ADVERTISEMENT

ಕಣ್ಣಿಗೆ ಖಾರದಪುಡಿ ಎರಚಿ ₹24 ಲಕ್ಷ ದರೋಡೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2017, 19:52 IST
Last Updated 6 ಡಿಸೆಂಬರ್ 2017, 19:52 IST

ಬೆಳಗಾವಿ: ಇಲ್ಲಿನ ಪಿ.ಬಿ.ರಸ್ತೆ ಸಮೀಪ ಬಸ್ಸಿಗೆ ಕಾಯುತ್ತಿದ್ದ ಹೂವಿನ ವ್ಯಾಪಾರಿಯೊಬ್ಬರ ಕಣ್ಣಿಗೆ ಖಾರದ ಪುಡಿ ಎರಚಿ, ಅವರ ಬಳಿ ಇದ್ದ ₹24 ಲಕ್ಷ ನಗದು ದೋಚಲಾಗಿದೆ.

ತುಮಕೂರು ಜಿಲ್ಲೆ ಶಿರಾ ಪಟ್ಟಣದ ನಾರಾಯಣ ಮದ್ದಪ್ಪ ಹಣ ಕಳೆದುಕೊಂಡವರು.

‘ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಿಗೆ ಹೂವು ಸರಬರಾಜು ಮಾಡುವ ನಾರಾಯಣ, ವ್ಯಾಪಾರಿಗಳಿಂದ ಹಣ ಪಡೆದುಕೊಂಡು ಹೋಗಲು ಬಂದಿದ್ದರು. ಕೇಂದ್ರ ಬಸ್ ನಿಲ್ದಾಣದ ಎದುರಿನ ಅಪೋಲೊ ವಸತಿಗೃಹದಲ್ಲಿ ತಂಗಿದ್ದ ಅವರು ಊರಿಗೆ ಮರಳಲೆಂದು ಖಾಸಗಿ ಬಸ್ಸಿಗಾಗಿ ಕಾಯುತ್ತಿದ್ದಾಗ ಈ ಘಟನೆ ನಡೆದಿದೆ. ಆರೋಪಿಗಳು ಪಲ್ಸರ್‌ ಬೈಕ್‌ನಲ್ಲಿ ಬಂದಿದ್ದರು’ ಎಂದು ಮಾಳಮಾರುತಿ ಠಾಣೆ ಇನ್‌ಸ್ಪೆಕ್ಟರ್‌ ಚನ್ನಕೇಶವ ಟಿಂಗರಿಕರ ತಿಳಿಸಿದರು.

ADVERTISEMENT

‘ಇಡೀ ಘಟನೆಯು ಹೋಟೆಲ್‌ನಲ್ಲಿ ಅಳವಡಿಸಿದ್ದ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆದರೆ, ವಾಹನದ ನೋಂದಣಿ ಸಂಖ್ಯೆ ಸ್ಪಷ್ಟವಾಗಿ ಕಾಣುತ್ತಿಲ್ಲ. ಆರೋಪಿಗಳು ಸ್ಥಳೀಯರು ಎನ್ನುವ ಸುಳಿವು ದೊರೆತಿದೆ. ಶೀಘ್ರವೇ ಬಂಧಿಸಲಾಗುವುದು’ ಎಂದು ಡಿಸಿಪಿ ಅಮರನಾಥರೆಡ್ಡಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.