ಬೆಂಗಳೂರು: ಮಾರ್ಚ್ 7ರಂದು ಇರಿತಕ್ಕೊಳಗಾಗಿದ್ದ ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಸಂಪೂರ್ಣ ಚೇತರಿಸಿಕೊಂಡಿದ್ದು ಸೋಮವಾರ ಕರ್ತವ್ಯಕ್ಕೆ ಹಾಜರಾದರು.
ಬೆಳಿಗ್ಗೆ ಎಂದಿನಂತೆ ಸೂಟ್ ಧರಿಸಿ ಕಚೇರಿಗೆ ಬಂದ ಲೋಕಾಯುಕ್ತರನ್ನು ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಪುಷ್ಪಗುಚ್ಛ ಕೊಟ್ಟು ನಗುಮುಖದಿಂದ ಸ್ವಾಗತಿಸಿದರು. ಸಂಜೆವರೆಗೂ ಕಚೇರಿಯಲ್ಲಿ ಕೂತು ಅಧಿಕಾರಿಗಳ ಜೊತೆ ಸಭೆ ನಡೆಸಿದ ನ್ಯಾ.ಶೆಟ್ಟಿ ಕೆಲವು ಕಡತಗಳನ್ನು ತರಿಸಿಕೊಂಡು ನೋಡಿದರು ಎಂದು ಮೂಲಗಳು ತಿಳಿಸಿವೆ.
ಈ ಘಟನೆ ಬಳಿಕ ಲೋಕಾಯುಕ್ತ ಕಚೇರಿಯ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಸಾರ್ವಜನಿಕರನ್ನು ಸಂಪೂರ್ಣವಾಗಿ ಶೋಧಿಸಿ ಒಳ ಬಿಡಲಾಗುತ್ತಿದೆ. ಮುಖ್ಯ ದ್ವಾರದಲ್ಲಿ ಲೋಹ ಶೋಧಕ ಯಂತ್ರ ಅಳವಡಿಸಲಾಗಿದೆ. ಅನೇಕ ಕಡೆಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಹಾಕಲಾಗಿದೆ.
ಇದಕ್ಕೆಲ್ಲಾ ಹೆದರೋಲ್ಲ: ‘ನಾನು ಇದಕ್ಕೆಲ್ಲಾ ಹೆದರಲ್ಲಾ. ನನ್ನ ಪಾಡಿಗೆ ಕೆಲಸ ಮಾಡಿಕೊಂಡು ಹೋಗುತ್ತೇನೆ. ಪ್ರಕರಣದ ತನಿಖೆ ಕುರಿತು ಏನೂ ಹೇಳುವುದಿಲ್ಲ. ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಿದ್ದಾರೆ. ಈ ಬಗ್ಗೆ ಮಾತನಾಡುವುದು ಸರಿಯಲ್ಲ’ ಎಂದು ಲೋಕಾಯುಕ್ತರು ತಮ್ಮನ್ನು ಭೇಟಿಯಾದ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
**
ತುಮಕೂರು ಜಿಲ್ಲೆಯ ತೇಜ್ರಾಜ್ ಎಂಬಾತ ಶೆಟ್ಟಿ ಅವರನ್ನು ಮಾರ್ಚ್ 7ರಂದು ಚಾಕುವಿನಿಂದ ಇರಿದಿದ್ದ. ಅವರನ್ನು ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.