ತುಮಕೂರು: ‘ನಾವು ಏಳು ಶಾಸಕರು ಕಾಂಗ್ರೆಸ್ ಪಕ್ಷ ಸೇರುವುದು ಖಚಿತ. ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರೊಂದಿಗೆ ಬಹಳ ದಿನಗಳ ಹಿಂದೆಯೇ ನೇರವಾಗಿ ಮಾತನಾಡಿದ್ದು, ಅವರೂ ಒಪ್ಪಿದ್ದಾರೆ’ ಎಂದು ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹಮ್ಮದ್ ಹೇಳಿದರು.
ಭಾನುವಾರ ನಗರದಲ್ಲಿ ಕಾಂಗ್ರೆಸ್ ಮುಖಂಡ ಎಚ್.ನಿಂಗಪ್ಪ ಅವರ ಮನೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
‘ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಪರಮೇಶ್ವರ್ ಅವರೊಂದಿಗೂ ಪಕ್ಷ ಸೇರುವ ಬಗ್ಗೆ ಮಾತನಾಡಿದ್ದೇವೆ’ ಎಂದರು.
‘ಜೆಡಿಎಸ್ ಪಕ್ಷವೇ ನಮ್ಮನ್ನೂ ಸರಿಯಾಗಿ ನಡೆಸಿಕೊಂಡಿಲ್ಲ. ಆ ಪಕ್ಷಕ್ಕೆ ಎಷ್ಟು ದುಡಿದರೂ ಪ್ರಯೋಜನವಿಲ್ಲ. ಹೀಗಾಗಿ, ಕಾಂಗ್ರೆಸ್ ಪಕ್ಷ ಸೇರುವ ನಿರ್ಧಾರ ತೆಗೆದುಕೊಂಡಿದ್ದೇವೆ. ನವೆಂಬರ್–ಡಿಸೆಂಬರ್ ತಿಂಗಳಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುತ್ತೇವೆ’ ಎಂದು ಹೇಳಿದರು.
‘ಕಾಂಗ್ರೆಸ್ ಪಕ್ಷವೆಂದರೆ ಬದ್ಧತೆಯುಳ್ಳ ಪಕ್ಷವಾಗಿದೆ. ಮಾತುಕೊಟ್ಟಂತೆ ಪಕ್ಷದ ವರಿಷ್ಠರು, ಮುಖಂಡರು ನಡೆದುಕೊಳ್ಳುತ್ತಾರೆ. ಜೆಡಿಎಸ್ ಪಕ್ಷದಂತೆ ಸೂಟ್ಕೇಸ್ ಹಿಡಿದು ಬಂದವರಿಗೆ ಮಣೆ ಹಾಕುವುದಿಲ್ಲ’ ಎಂದು ಟೀಕಿಸಿದರು.
‘ವಿಧಾನಸಭಾ ಚುನಾವಣೆಗೆ ಚಾಮರಾಜಪೇಟೆಯಿಂದಲೇ ಶೇ 200ರಷ್ಟು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿಯೇ ಸ್ಪರ್ಧಿಸುತ್ತೇನೆ’ ಎಂದರು.
ದೇವರೇ ಹೇಳಿಸಿದ್ದಾನೆ: ‘2006ರಿಂದ ಜೆಡಿಎಸ್ ಪಕ್ಷದಲ್ಲಿ ಸೂಟ್ಕೇಸ್ ಸಂಸ್ಕೃತಿಯೇ ನಡೆದಿರುವುದು. ಅದಕ್ಕಿಂತ ಮುಂಚೆ ಅದಿರಲಿಲ್ಲ. ಸೂಟ್ಕೇಸ್ ತೆಗೆದುಕೊಂಡು ಬರುವವರನ್ನು ದೇವೇಗೌಡರು ದೂರ ಇಡುತ್ತಿದ್ದರು’ ಎಂದು ಹೇಳಿದರು.
‘ಜೆಡಿಎಸ್ನಲ್ಲಿ ಸೂಟ್ಕೇಸ್ ಸಂಸ್ಕೃತಿ ಇದೆ ಎಂದು ನಾವು ಯಾರಾದರೂ ಹೇಳಿದ್ದರೆ ರಾಜಕೀಯ ಕಾರಣಕ್ಕೆ ಹೇಳುತ್ತಾರೆ ಎನ್ನುತ್ತಿದ್ದರು. ಈಗ ಪ್ರಜ್ವಲ್ ರೇವಣ್ಣ ತಾವಾಗಿಯೇ ಹೇಳಿಲ್ಲ. ದೇವರೇ ಅವರ ಮೂಲಕ ಹೇಳಿದ್ದಾನೆ’ ಎಂದು ತಿಳಿಸಿದರು.
‘ವಿಜಯ್ ಮಲ್ಯ, ರಾಮಸ್ವಾಮಿ, ರಾಜೀವ್ ಚಂದ್ರಶೇಖರ್, ಕುಪೇಂದ್ರರೆಡ್ಡಿ ಅವರನ್ನು ರಾಜ್ಯ ಸಭಾ ಸದಸ್ಯರನ್ನಾಗಿ ಮಾಡುವಾಗ ಯಾರು ಸೂಟ್ ಕೇಸ್ ತೆಗೆದುಕೊಂಡರು ಎಂಬುದನ್ನು ಬಹಿರಂಗಪಡಿಸಲಿ’ ಎಂದು ಹೇಳಿದರು.
ಸಿಬಿಐ ತನಿಖೆ ನಡೆಯಲಿ: ‘ಸೂಟ್ಕೇಸ್ ಸಂಸ್ಕೃತಿ ಬಗ್ಗೆ ಸಿಬಿಐ ತನಿಖೆ ನಡೆಯಲಿ ಎಂದು ಈಗಾಗಲೇ ಹೇಳಿದ್ದೇವೆ. ತನಿಖೆ ನಡೆಸಲು ಅವರೂ ಒಪ್ಪಲಿ. ಜೆಡಿಸ್ ರಾಜ್ಯ ಘಟಕ ಅಧ್ಯಕ್ಷ ಕುಮಾರಸ್ವಾಮಿ ಮಾತಿನ ಮಲ್ಲ. ಯಾವುದನ್ನೂ ಒಪ್ಪುವುದಿಲ್ಲ’ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.