ADVERTISEMENT

ಕಾರಿನಲ್ಲಿ ಯದುವೀರ, ತ್ರಿಷಿಕಾ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2016, 22:30 IST
Last Updated 29 ಜೂನ್ 2016, 22:30 IST
ಕಾರಿನಲ್ಲಿ ಯದುವೀರ, ತ್ರಿಷಿಕಾ ಮೆರವಣಿಗೆ
ಕಾರಿನಲ್ಲಿ ಯದುವೀರ, ತ್ರಿಷಿಕಾ ಮೆರವಣಿಗೆ   

ಮೈಸೂರು: ನಗರದ ಅರಮನೆಯ ವಿಶಾಲ ಆವರಣದಲ್ಲಿ ಬುಧವಾರ ರಾತ್ರಿ ನಡೆದ ನವದಂಪತಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಹಾಗೂ ತ್ರಿಷಿಕಾ ಕುಮಾರಿ ಅವರ ವೈಭವದ ಮೆರವಣಿಗೆಯನ್ನು ಸಾರ್ವಜನಿಕರು ಕಣ್ತುಂಬಿಕೊಂಡರು. ಅರಮನೆಯ ಸವಾರ್‌ ತೊಟ್ಟಿಯ ಬಾಗಿಲಲ್ಲಿ ರಾತ್ರಿ 7.15ಕ್ಕೆ ಬಿಎಂಡಬ್ಲ್ಯು ಕಾರನ್ನೇರಿದ ದಂಪತಿ, ಜನರತ್ತ ಕೈಬೀಸಿದರು. ಮುಂದಿನ ಸೀಟಿನಲ್ಲಿ ಪ್ರಮೋದಾದೇವಿ ಒಡೆಯರ್‌ ಆಸೀನರಾಗಿದ್ದರು. ಪೊಲೀಸ್‌ ವಾದ್ಯ ವೃಂದದವರು ಇಂಗ್ಲಿಷ್‌ ಬ್ಯಾಂಡ್‌ ನುಡಿಸುತ್ತಾ ಮುನ್ನಡೆದರು.

ಅರಮನೆಯ ವಿದ್ಯುತ್‌ ದೀಪಾಲಂಕಾರದಲ್ಲಿ ಮೆರವಣಿಗೆ ಕಂಗೊಳಿಸಿತು. ಹಾದಿಯ ಇಕ್ಕೆಲಗಳಲ್ಲಿ ನಿಂತ ಜನರು ‘ಯದುವೀರ್‌ ಕೀ ಜೈ’ ಎಂದು ಘೋಷಣೆ ಹಾಕಿದರು. ಮಲ್ಲಿಗೆ ಹೂವಿನಿಂದ ಅಲಂಕರಿಸಿದ್ದ ಕಾರು ಸಮೀಪ ಬರುತ್ತಿದ್ದಂತೆ ಯುವಕ– ಯುವತಿಯರು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು. ಈ ಸಂದರ್ಭದಲ್ಲಿ ನೂಕುನುಗ್ಗಲು ಉಂಟಾಯಿತು.

ಆವರಣದಲ್ಲಿ ಆರು ಆನೆಗಳು ಘೀಳಿಡುವ ಮೂಲಕ ಯದುವೀರ ಹಾಗೂ ತ್ರಿಷಿಕಾ ಅವರನ್ನು ಹರಸಿದವು. ತುಂತುರು ಮಳೆಯನ್ನೂ ಲೆಕ್ಕಿಸದೆ ಜನರು ಫೊಟೊ ಕ್ಲಿಕ್ಕಿಸುತ್ತಲೇ ಇದ್ದರು.

ಮತ್ತೊಂದು ಮಾಂಗಲ್ಯ ಧಾರಣೆ: ಮಧ್ಯಾಹ್ನ ನಡೆದ ನಾಗೋಲಿ ಕಾರ್ಯಕ್ರಮದಲ್ಲಿ ಯದುವೀರ ಅವರು ಯದುವಂಶದ ಸಂಪ್ರದಾಯದಂತೆ ತ್ರಿಷಿಕಾ ಅವರಿಗೆ ಮತ್ತೊಂದು ಮಾಂಗಲ್ಯ ಧಾರಣೆ ಮಾಡಿದರು. ನಂತರ ನವದಂಪತಿಯ ಕಂಕಣ ವಿಸರ್ಜಿಸಲಾಯಿತು. ವಿವಿಧ ಪೂಜಾ ಕೈಂಕರ್ಯ ಬಳಿಕ ತ್ರಿಷಿಕಾ ಕುಮಾರಿ ಅವರನ್ನು ಮನೆತುಂಬಿಸಿಕೊಳ್ಳಲಾಯಿತು. ಪತಿ ಯದುವೀರ, ಅತ್ತೆ ಪ್ರಮೋದಾದೇವಿ ಹಾಗೂ ಕುಟುಂಬದವರ ಸಮ್ಮುಖದಲ್ಲಿ ಮಧ್ಯಾಹ್ನ 2.45ರ ಸುಮಾರಿಗೆ ಮದನ ವಿಲಾಸ ಬಾಗಿಲು ಮೂಲಕ ಗೃಹ ಪ್ರವೇಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.