ADVERTISEMENT

ಕಾರು ಅಪಘಾತ: ಮಾಜಿ ಕೇಂದ್ರ ಸಚಿವ, ಜಮಖಂಡಿಯ ಶಾಸಕ ಸಿದ್ದು ನ್ಯಾಮಗೌಡ ಸ್ಥಳದಲ್ಲಿಯೇ ಸಾವು

​ಪ್ರಜಾವಾಣಿ ವಾರ್ತೆ
Published 28 ಮೇ 2018, 1:53 IST
Last Updated 28 ಮೇ 2018, 1:53 IST
ಸಿದ್ದು ನ್ಯಾಮಗೌಡ
ಸಿದ್ದು ನ್ಯಾಮಗೌಡ   

ಬಾಗಲಕೋಟೆ: ಬಾಗಲಕೋಟೆ ತಾಲ್ಲೂಕಿನ ತುಳಸಿಗೇರಿಯ ಬಳಿ ಇಂದು ಬೆಳಗ್ಗಿನ ಜಾವ 4.30ರ ವೇಳೆ ಸಂಭಸಿದ ಅಪಘಾತದಲ್ಲಿ  ಮಾಜಿ ಕೇಂದ್ರ ಸಚಿವ ಹಾಗೂ ಜಮಖಂಡಿಯ ಶಾಸಕ ಸಿದ್ದು ನ್ಯಾಮಗೌಡ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ದೆಹಲಿಯ ನಿಜಾಮುದ್ದಿನ್ ಔಲಿಯಾ ದರ್ಗಾಕ್ಕೆ ತೆರಳಿದ್ದ ಅವರು ವಿಮಾನದ ಮೂಲಕ ಪಣಜಿಗೆ ಬಂದು ಅಲ್ಲಿಂದ  ಕಾರಿನಲ್ಲಿ ಜಮಖಂಡಿಗೆ ವಾಪಸ್ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.

ಕಾರಿನ ಚಾಲಕ ಪರಮಾನಂದ ಅಂಬಿ(27) ಅನ್ವರ್ ಮೋಮಿನ್, (45) ಮೌಲಾನಾ ರಜವಿ(54),  ಅಬ್ದುಲ್ ರಶೀದ್  (72) ಮೊದಲಾದವರಿಗೆ  ಗಂಭೀರ ಗಾಯಗಳಾಗಿವೆ.
ಸಿದ್ದು ನ್ಯಾಮಗೌಡ ಅವರಿಗೆ ಪತ್ನಿ, ಮೂವರು ಪುತ್ರಿಯರು ಹಾಗೂ ಇಬ್ಬರು ಪುತ್ರರು ಇದ್ದಾರೆ.

ADVERTISEMENT

ಸರ್ಕಾರದ ನೆರವು ಇಲ್ಲದೇ ರೈತರಂದ ವಂತಿಗೆ ಸಂಗ್ರಹಿಸಿ ಕೃಷ್ಣಾ ನದಿಗೆ ಚಿಕ್ಕಪಡಸಲಗಿ ಬಳಿ ಬ್ಯಾರೇಜ್ ನಿರ್ಮಿಸಿದ್ದ ಸಿದ್ದು ನ್ಯಾಮಗೌಡ, ಬ್ಯಾರೇಜ್ ನ್ಯಾಮಗೌಡ ಎಂದೇ ಹೆಸರಾಗಿದ್ದರು. ಆ ಬ್ಯಾರೇಜ್ ಜಮಖಂಡಿ ಸುತ್ತಲಿನ ಸಾವಿರಾರು ಎಕರೆ ಜಮೀನಿಗೆ ನೀರುಣಿಸಿ ಆ ಪ್ರದೇಶ ಕಬ್ಬಿನ ಕಣಜ ಎಂದೇ ಹೆಸರಾಗಿದೆ.

ಬ್ಯಾರೇಜ್ ಜನಪ್ರಿಯತೆಯೇ 1991 ರಲ್ಲಿ  ಬಾಗಲಕೋಟೆಯಿಂದ ಲೋಕಸಭೆಗೆ ಸ್ಪರ್ಧಿಸಿದ್ದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ವಿರುದ್ಧ ಗೆಲುವು ಸಾಧಿಸಲು ಮೆಟ್ಟಿಲಾಗಿ ಪಿ.ವಿ.ನರಸಿಂಹರಾವ್ ಸರ್ಕಾರದಲ್ಲಿ ಕೇಂದ್ರದ ಕಲ್ಲಿದ್ದಲು ಖಾತೆ ಸಚಿವರಾಗಿ ಕೆಲಸ ಮಾಡಿದ್ದರು. ಮೂರು ಬಾರಿ ಶಾಸಕರಾಗಿರುವ ಸಿದ್ದು ನ್ಯಾಮಗೌಡ ಇದೀಗ ಸತತ ಎರಡನೇ ಬಾರಿ ಜಮಖಂಡಿ ಕ್ಷೇತ್ರ ಪ್ರತಿನಿಧಿಸಿದ್ದರು.

ಈ ಬಾರಿ  ಬಾಗಲಕೋಟೆ ಜಿಲ್ಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಟ್ಟರೆ ಕಾಂಗ್ರೆಸ್ ನಿಂದ  ಸಿದ್ದು ನ್ಯಾಮಗೌಡ ಮಾತ್ರ ಆಯ್ಕೆಯಾಗಿದ್ದರು. ನ್ಯಾಮಗೌಡ ದೇಹವನ್ನು ಇಲ್ಲಿನ ನವನಗರದ ಜಿಲ್ಲಾ ಆಸ್ಪತ್ರೆಗೆ ತರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.