ಬೆಂಗಳೂರು: ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗೆ ಸಂಬಂಧಿಸಿದಂತೆ ಆದೇಶ ಮರು ಪರಿಶೀಲನೆ ಕೋರಿ ಅಟಾರ್ನಿ ಜನರಲ್ ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದ್ದಾರೆ.
ಅಕ್ಟೋಬರ್ 4ರೊಳಗೆ ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 30ರಂದು ನೀಡಿದ್ದ ಆದೇಶಕ್ಕೆ ಆಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಒಪ್ಪಿಗೆ ಸೂಚಿಸಿದ್ದರು. ಇದೀಗ ಆದೇಶ ಮರು ಪರಿಶೀಲಿಸುವಂತೆ ಕೋರಿ ಕೇಂದ್ರ ಸರ್ಕಾರದಿಂದ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಕೆಯಾಗಿದೆ.
ಅಟಾರ್ನಿ ಜನರಲ್ ನೀಡಿರುವ ಅರ್ಜಿ ವಿಚಾರಣೆಯನ್ನು ಮಂಗಳವಾರ ನಡೆಸುವುದಾಗಿ ಸುಪ್ರೀಂ ಕೋರ್ಟ್ ನಿಗದಿ ಪಡಿಸಿದೆ. ನಿರ್ವಹಣಾ ಮಂಡಳಿ ರಚನೆ ಸಂಸತ್ತಿನ ಜವಾಬ್ದಾರಿಯಾಗಿದೆ ಎನ್ನುವ ಕಾರಣ ನೀಡಲಾಗಿದೆ.
ವಿಧಾನಸಭೆ ವಿಶೇಷ ಅಧಿವೇಶನ
ಕಾವೇರಿ ನೀರು ಹಂಚಿಕೆ ಕುರಿತಾದ ಚರ್ಚೆಗಾಗಿ ರಾಜ್ಯ ವಿಧಾನ ಮಂಡಲದ ವಿಶೇಷ ಅಧಿವೇಶನ ಆರಂಭವಾಗಿದೆ. ಅಧಿವೇಶನವಲ್ಲಿ ಚರ್ಚೆಯಾಗಲಿರುವ ವಿಷಯ ಸೇರಿದಂತೆ ಸೆ.30ರಂದು ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವನ್ನು ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಸದನದಲ್ಲಿ ಓದಿ ತಿಳಿಸಿದರು.
ಕಾವೇರಿ ನೀರು ನಿರ್ವಹಣಾ ಮಂಡಳಿ ರಚೆನೆ ಹಾಗೂ ಅಕ್ಟೋಬರ್ 6ರವರೆಗೂ 36 ಸಾವಿರ ಕ್ಯೂಸೆಕ್ ನೀರು ಹರಿಸಲು ಸುಪ್ರೀಂ ಕೋರ್ಟ್ ಆದೇಶಿಸಿದೆ.
ಕೋರ್ಟ್ ಆದೇಶ ಪಾಲಿಸುವ ಅನಿವಾರ್ಯತೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೃಷಿ ಚಟುವಟಿಕೆಗಳಿಗಾಗಿ ರೈತರಿಗೆ ನೀರು ಹರಿಸುವ ನಿರ್ಣಯ ಮಂಡನೆ ಸಾಧ್ಯತೆಯಿದ್ದು, ಸೆ.23ರಂದು ತೆಗೆದುಕೊಂಡ ನಿರ್ಣಯವನ್ನು ಬದಲಿಸುವ ಕುರಿತು ಚರ್ಚೆ ನಡೆಯಲಿದೆ ಎನ್ನಲಾಗಿದೆ.
*
ಇಡೀ ಸದನ ಪಕ್ಷ ಭೇದ ಮರೆತು ಎಚ್.ಡಿ.ದೇವೇಗೌಡರಿಗೆ ಋಣಿಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರಿಗೂ ಧನ್ಯವಾದ...ಈ ನಾಯಕರನ್ನು ಒಂದು ಪಕ್ಷಕ್ಕೆ ಸೀಮಿತಗೊಳಿಸಬಾರದು.
–ರಮೇಶ್ ಕುಮಾರ್, ಸಚಿವ
ರಾಜ್ಯದ ವಕೀಲ ಫಾಲಿ ಎಸ್.ನಾರಿಮನ್ ಅವರನ್ನು ಶೀಘ್ರವೇ ಬದಲಿಸಿ. 76 ಕೋಟಿ ರೂ. ಖರ್ಚು ಮಾಡಿಯಾಗಿದೆ. ಇದರಿಂದ ಕರ್ನಾಟಕಕ್ಕೆ ಏನೇನೂ ಉಪಯೋಗವಾಗಿಲ್ಲ. ಅಟಾರ್ನಿ ಜನರಲ್ ಒಂದು ಬಾರಿ ಮಾಡಿದ ತಪ್ಪನ್ನು ತಿದ್ದುಕೊಂಡಿದ್ದಾರೆ. ನಾರಿಮನ್ ನೂರು ಬಾರಿ ತಪ್ಪು ಮಾಡಿದ್ದಾರೆ.
–ಕೆ.ಎಸ್.ಈಶ್ವರಪ್ಪ, ವಿಪಕ್ಷ ನಾಯಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.