ADVERTISEMENT

ಕುಮಟಾ: ಚರಂಡಿಗೆ ಮುಚ್ಚಿದ್ದ ಹಳಗನ್ನಡ ಶಿಲಾ ಶಾಸನ ಪತ್ತೆ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2015, 20:00 IST
Last Updated 2 ನವೆಂಬರ್ 2015, 20:00 IST

ಕುಮಟಾ (ಉತ್ತರ ಕನ್ನಡ ಜಿಲ್ಲೆ): ಪಟ್ಟಣದಲ್ಲಿ ಹಳಗನ್ನಡದ ಶಿಲಾ ಶಾಸನವೊಂದು ಸೋಮವಾರ ಪತ್ತೆಯಾಗಿದೆ.

ಇಲ್ಲಿನ ಬಸ್ತಿಪೇಟೆಯಲ್ಲಿರುವ ಅಚ್ಯುತ್‌ ಪಂಡಿತ ಆಸ್ಪತ್ರೆ ಎದುರಿನ ರಸ್ತೆಯ ಚರಂಡಿ ಮುಚ್ಚಲು ಶಾಸನವುಳ್ಳ ಈ ಶಿಲೆಯನ್ನು ಬಳಸಲಾಗಿತ್ತು.

‘ಹಳಗನ್ನಡ ಅಕ್ಷರಗಳ ಒಟ್ಟು 39 ಸಾಲುಗಳಿರುವ ಶಿಲಾ ಶಾಸನ ಸಾಮ್ರಾಟ್‌ ಅಶೋಕನಿಂದ ಮುಂದೆ ವಿಜಯನಗರ ಅರಸರ ಕಾಲದವರೆಗೆ ಸಂಬಂಧಿಸಿದ್ದು ಇರಬಹುದು. ಚರಂಡಿಗೆ ಮುಚ್ಚಿದ್ದ ಶಿಲೆಯ ಮೇಲೆ ವಾಹನಗಳು ಓಡಾಡಿದ್ದರಿಂದ ಅದರ ಮೇಲೆ ಬರೆದ ಅಕ್ಷರಗಳು ಅಲ್ಲಲ್ಲಿ ಅಳಿಸಿ ಹೋಗಿವೆ.

ಶಿಲೆಯ ಮೇಲ್ಭಾಗದಲ್ಲಿ ಶಾಸನಕ್ಕೆ ಸಂಬಂಧಪಟ್ಟಂತೆ ಇದ್ದ ಚಿತ್ರ ಇರುವ ಭಾಗ ತುಂಡಾಗಿದೆ’ ಎಂದು ಪ್ರಾಚ್ಯವಸ್ತು ಇಲಾಖೆ ಧಾರವಾಡ ವಲಯ ಕಚೇರಿಯ ಪ್ರಾಚ್ಯ ವಸ್ತು ತಜ್ಞ ಡಾ. ಎಚ್‌.ಆರ್‌. ದೇಸಾಯಿ ಮಾಹಿತಿ ನೀಡಿದರು.

‘ಕೆಲ ದಿವಸಗಳ ಮೊದಲು ಕುಮಟಾದ ನಿವೃತ್ತ ಪ್ರಾಚ್ಯವಸ್ತು ಇಲಾಖೆ ಉಪನಿರ್ದೇಶಕ ಎಸ್‌.ಎಸ್‌. ನಾಯ್ಕ  ಈ ಬಗ್ಗೆ ಮಾಹಿತಿ ನೀಡಿದ್ದರು. ಇಲಾಖೆಯ ಧಾರವಾಡ ಕಚೇರಿ ಅಧೀಕ್ಷಕ ಎ.ಎಂ.ವಿ. ಸುಬ್ರಹ್ಮಣ್ಯಂ ಅವರ ಮಾರ್ಗದರ್ಶನದಲ್ಲಿ ಈ ಶಿಲಾ ಶಾಸನದ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT