ADVERTISEMENT

ಕೃಷಿ ಹೊಂಡಕ್ಕೆ ಬಿದ್ದು ಅಪ್ಪ, ಮಗ ಸಾವು

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2017, 20:10 IST
Last Updated 12 ಮಾರ್ಚ್ 2017, 20:10 IST

ಮಾಯಕೊಂಡ (ದಾವಣಗೆರೆ ತಾ): ಕೃಷಿ ಹೊಂಡಕ್ಕೆ ಬಿದ್ದ ಮಗನನ್ನು ರಕ್ಷಿಸಲು ಹೋಗಿ ತಂದೆಯೂ ಮೃತಪಟ್ಟು, ಮಗನೂ ಸಾವನಪ್ಪಿದ ದಾರುಣ ಘಟನೆ ಭಾನುವಾರ ಕ್ಷೇತ್ರ ವ್ಯಾಪ್ತಿಯ ಆನಗೋಡುವಿನಲ್ಲಿ ನಡೆದಿದೆ.

ಚೇತನ್‌ (10) ಹಾಗೂ ಯೋಗೇಶ್‌ (38) ಮೃತರು.

ಭಾನುವಾರ ರಜೆಯ ದಿನವಾದ್ದರಿಂದ ಚೇತನ್‌ ಅಪ್ಪನ ಜತೆ ಹೊಲಕ್ಕೆ ಹೋಗಿದ್ದ. ಈ ಸಂದರ್ಭ ಜಮೀನಿನಲ್ಲಿದ್ದ ಕೃಷಿ ಹೊಂಡಕ್ಕೆ ಆಕಸ್ಮಿಕವಾಗಿ ಬಿದ್ದಿದ್ದಾನೆ. ಇದನ್ನು ಗಮನಿಸಿ ಮಗನ ಪ್ರಾಣ ಉಳಿಸಲು ತಂದೆಯೂ ಕೃಷಿ ಹೊಂಡಕ್ಕೆ ಹಾರಿದ್ದಾರೆ. ಈಜು ಬಾರದ ಕಾರಣ ಇಬ್ಬರೂ ಸಾವನಪ್ಪಿದ್ದಾರೆ.

ADVERTISEMENT

ಸಂಜೆಯಾದರೂ ಅಪ್ಪ, ಮಗ ಮನೆಗೆ ಬಾರದಿದ್ದರಿಂದ ಆತಂಕಗೊಂಡ ಮೃತ ಯೋಗೇಶ್‌ ಪತ್ನಿ ಜಮೀನಿಗೆ ಬಂದಾಗ ಕೃಷಿ ಹೊಂಡದ ಬಳಿ ಮಗನ ಚಪ್ಪಲಿ ಬಿದ್ದಿರುವುದು ಗಮನಕ್ಕೆ ಬಂದಿದೆ.

ಆತಂಕಗೊಂಡು ಅಕ್ಕಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರಿಗೆ ವಿಷಯ ತಿಳಿಸಿ, ಹೊಂಡ ಶೋಧಿಸಿದಾಗ ಶವಗಳು ಪತ್ತೆಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.