ಬೆಳಗಾವಿ (ಪಿಟಿಐ): ಬೆಳಗಾವಿಯಲ್ಲಿ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಸ್ಥಾಪನೆಗೆ ಒತ್ತಾಯಿಸಿ ವಕೀಲರು ನಡೆಸುತ್ತಿರುವ ಧರಣಿ ಶನಿವಾರ ಏಳು ದಿನಗಳನ್ನು ಪೂರೈಸಿದೆ.
ಬೆಳಗಾವಿ ವಕೀಲರ ಸಂಘದ ಸದಸ್ಯರನ್ನು ಶನಿವಾರ ಭೇಟಿ ಮಾಡಿದ ಗೃಹ ಸಚಿವ ಕೆ.ಜೆ.ಜಾರ್ಜ್, ಬೆಳಗಾವಿಯಲ್ಲಿ ಕೆಎಟಿ ಸ್ಥಾಪಿಸುವುದಾಗಿ ಭರವಸೆ ನೀಡಲು ಇರುವ ಅಸಹಾಯಕತೆಯ ಬಗ್ಗೆ ವಿವರಿಸಿದ್ದಾರೆ.
ಅಲ್ಲದೇ, ವಕೀಲರ ಭಾವನೆಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡುವೆ. ಅವರು ಸೂಕ್ತ ಕ್ರಮವನ್ನು ಕೈಗೊಳ್ಳಲಿದ್ದಾರೆ ಎಂದಿರುವ ಜಾರ್ಜ್, ಧರಣಿಯನ್ನು ಕೈಬಿಡುವಂತೆ ಪ್ರತಿಭಟನಾ ನಿರತರಲ್ಲಿ ಮನವಿ ಮಾಡಿದ್ದಾರೆ.
ನೆರದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ವಕೀಲ ಎಂ.ಬಿ.ಜಿರಲಿ, ಕೆಎಟಿ ಮತ್ತು ನ್ಯಾಯಾಲಯಗಳು ಮತ್ತು ನ್ಯಾಯಮಂಡಳಿಗಳ ಸ್ಥಾಪನೆಗೆ ಸರ್ಕಾರ ಬೆಳಗಾವಿಯ ಹೆಸರನ್ನು ಶಿಫಾರಸು ಮಾಡಬೇಕು. ಹೈಕೋರ್ಟ್ ಆವರಣಗಳಲ್ಲಿ ಮಾತ್ರವೇ ಕೆಎಟಿ ಸ್ಥಾಪಿಸಬಾರದು ಎಂದು ಒತ್ತಾಯಿಸಿದರು.
ಸರ್ಕಾರದ ಕಡೆಯಿಂದ ಸೂಕ್ತ ಪ್ರತಿಕ್ರಿಯೆ ಲಭ್ಯವಾಗದಿದ್ದರೆ ಡಿಸೆಂಬರ್ 10 ಹಾಗೂ 11ರಂದು ಬೆಳಗಾವಿಯಲ್ಲಿರುವ ಸುವರ್ಣ ವಿಧಾನಸೌಧದ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.