ಗಂಗಾವತಿ (ಕೊಪ್ಪಳ ಜಿಲ್ಲೆ): ವಿರಕ್ತ ಕಲ್ಲು ಮಠದ ಪೀಠಾಧಿಪತಿ ಕೊಟ್ಟೂರು ಸ್ವಾಮೀಜಿ ಅವರು ಮಹಿಳೆಯೊಂದಿಗೆ ವಸತಿ ಗೃಹದ ಕೊಠಡಿಯಲ್ಲಿ ಇರುವ ವಿಡಿಯೊ ಬಹಿರಂಗವಾಗಿದೆ.
ವಿಡಿಯೊ ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಸ್ವಾಮೀಜಿ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ. ವಿಷಯ ತಿಳಿದು ಮಠದ ಆವರಣಕ್ಕೆ ಬಂದ ಭಕ್ತರು ಆಕ್ರೋಶ ವ್ಯಕ್ತಪಡಿಸಿದರು. ಸ್ವಾಮೀಜಿ ಇನ್ನು ಮಠಕ್ಕೆ ಕಾಲಿಡಬಾರದು ಎಂದು ಕೂಗಿದರು. ದಾಂದಲೆಗೂ ಮುಂದಾದರು. ಕೆಲವರು ಇದು ಸ್ವಾಮೀಜಿ ವಿರುದ್ಧ ನಡೆಸಿದ ಪಿತೂರಿ ಎಂದು ಸಮರ್ಥಿಸಿಕೊಳ್ಳಲು ಮುಂದಾದರು. ಸ್ಥಳಕ್ಕೆ ಬಂದ ಲಿಂಗಾಯತ ಹಾಗೂ ಜಂಗಮ ಸಮಾಜದ ಕೆಲ ಮುಖಂಡರು ಯುವಕರನ್ನು ಸಮಾಧಾನ ಮಾಡಿ ಪರಿಸ್ಥಿತಿ ನಿಭಾಯಿಸಿದರು.
ವಿಡಿಯೊದಲ್ಲೇನಿದೆ?: ಧಾರವಾಡದ ಎಸ್ಡಿಎಂ ಆಸ್ಪತ್ರೆಯ ಸಮೀಪದ ವಸತಿಗೃಹವೊಂದರ ಕೊಠಡಿ ಸಂಖ್ಯೆ-303ರಲ್ಲಿ ನಡೆದ ದೃಶ್ಯ ರಹಸ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಬ್ಬರು ಯುವಕರು ಕೋಣೆ ಪ್ರವೇಶಿಸುತ್ತಿದ್ದಂತೆಯೇ ಮಹಿಳೆ ಮೈಮೇಲೆ ಟವೆಲ್ ಹಾಕಿಕೊಂಡು ನಿಂತಿರುವ ಹಾಗೂ ಸ್ವಾಮೀಜಿ ಹಾಸಿಗೆಯಿಂದ ಎದ್ದು ಬರುವ ದೃಶ್ಯವಿದೆ.
(ಡಾ.ಕೊಟ್ಟೂರು ಸ್ವಾಮೀಜಿ)
‘ಇದೊಂದು ಷಡ್ಯಂತ್ರವಾಗಿದ್ದು, ಮಠದ ಏಳಿಗೆ ಬಯಸದ ಕೆಲವರು ಇದನ್ನು ಮಾಡಿದ್ದಾರೆ’ ಎಂದು ದಲಿತ ಮುಖಂಡ ದೇವಪ್ಪ ಕಾಮದೊಡ್ಡಿ ಹೇಳಿದರು.
ಸ್ವಾಮೀಜಿಯ ಕಾರು ಚಾಲಕ ಮಲ್ಲಯ್ಯಸ್ವಾಮಿ ಈ ವಿಡಿಯೊ ಬಹಿರಂಗಪಡಿಸಿದ್ದು, ಜೀವ ಬೆದರಿಕೆ ಇರುವುದಾಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
‘ಬದಲಿಗೆ ನಿರ್ಧಾರ’
‘ಭಕ್ತರ ಒತ್ತಾಯದ ಮೇಲೆ ಮಠದ ಸ್ವಾಮೀಜಿಯನ್ನು ಬದಲಾಯಿಸಲು ನಿರ್ಧರಿಸಲಾಗಿದೆ’ ಎಂದು ಅಖಿಲಭಾರತ ವೀರಶೈವ ಮಹಾಸಭಾದ ಗಂಗಾವತಿ ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಎಚ್.ಹಾಲಸಮುದ್ರ ತಿಳಿಸಿದರು.
* ನನ್ನನ್ನು ಕೆಲಸ ಬಿಡಿಸುವ ಅಂಜಿಕೆಯಿಂದ ಹೇಳಿರಲಿಲ್ಲ. ಆದರೆ, ಸ್ವಾಮೀಜಿ ಜೀವ ಬೆದರಿಕೆ ಹಾಕಿದ್ದರ ಪರಿಣಾಮ ಪ್ರಕರಣ ಹೊರಬರುವಂತಾಗಿದೆ.
-ಮಲ್ಲಯ್ಯಸ್ವಾಮಿ, ಕಲ್ಲುಮಠದ ಸ್ವಾಮೀಜಿಯ ಕಾರುಚಾಲಕ ಹಿರೇಜಂತಕಲ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.