ADVERTISEMENT

ಕೊನೆಗೂ ಬಂತಲ್ಲ ಪ್ರಶಸ್ತಿ: ನಾಯಕ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2014, 19:30 IST
Last Updated 19 ಡಿಸೆಂಬರ್ 2014, 19:30 IST

ಮೈಸೂರು: ‘ಇರುವಾಗಲೇ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂತಲ್ಲ ಎನ್ನುವ ಸಂತೋಷವಾಗಿದೆ’ ಎಂದು ಹಿರಿಯ ವಿಮರ್ಶಕ ಜಿ.ಎಚ್. ನಾಯಕ ತಿಳಿಸಿದರು.

2011ರ ಅವರ ‘ಉತ್ತರಾರ್ಧ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತವಾದ ಕುರಿತು ಶುಕ್ರವಾರ ‘ಪ್ರಜಾವಾಣಿ’ಯೊಂದಿಗೆ ಅವರು ಮಾತನಾಡಿದರು.

‘ಈ ಪ್ರಶಸ್ತಿಯಿಂದ1973ರಲ್ಲಿ ನಡೆದ ಘಟನೆ ನೆನಪಾ­ಗು­ತ್ತಿದೆ. ಆ ವರ್ಷ ಕೇಂದ್ರ ಸಾಹಿತ್ಯ ಅಕಾಡೆಮಿಯು ಪ್ರೊ.ಕೆ.­ಆರ್­. ಶ್ರೀನಿವಾಸ್ ಅಯ್ಯಂಗಾರ್‌ ಸಂಪಾದಕತ್ವದಲ್ಲಿ ‘ಇಂಡಿ­ಯನ್‌ ಲಿಟರೇಚರ್‌ ಸಿನ್ಸ್‌ ಇಂಡಿಪೆಂಡೆನ್ಸ್‌’ ಗ್ರಂಥ ಪ್ರಕಟಿ­ಸಿತು. ಇದರಲ್ಲಿ 21 ಪುಟಗಳ ನನ್ನ ಲೇಖನ ಪ್ರಕಟವಾಯಿತು. ಸ್ವಾತಂತ್ರ್ಯ ಬಂದಾಗಿನಿಂದ 25 ವರ್ಷಗಳ ಕನ್ನಡ ಸಾಹಿತ್ಯ ವಿಮರ್ಶಾ­ತ್ಮಕ ಅವಲೋಕನದ ಲೇಖನವದು.

ಅದು ಪ್ರಕಟ­ವಾ­ದಾಗ ಕನ್ನಡ ಸಾಹಿತ್ಯದಲ್ಲಿ ಅಲ್ಲೋಲ ಕಲ್ಲೋಲ­ವಾ­ಯಿತು. ಪರ–ವಿರೋಧದ ಚರ್ಚೆಗಳು ನಡೆ­ದವು. ಆಗ ನಾನು ಉತ್ತರ ಹೇಳಲಿಲ್ಲ. ನನ್ನ ಮಟ್ಟಿಗೆ ಪ್ರಾಮಾ­ಣಿಕವಾಗಿ ಬರೆದಿದ್ದೆ ಎಂದೆನ್ನಿ­ಸುತ್ತಿದೆ. ಅನೇಕ ಸಾಹಿತಿಗಳು ತಮ್ಮ ಹೆಸರುಗಳನ್ನು ದಾಖಲಿಸಲಿಲ್ಲವೆಂದು ಕೋಪಿಸಿ­ಕೊಂಡಿ­ದ್ದರು. ಇದನ್ನು ಎಷ್ಟೋ ಸಾಹಿತಿಗಳು ಖಂಡಿಸಿದರು. ಆದರೆ, ‘ಪ್ರಜಾವಾಣಿ’­ಯಲ್ಲಿ ನನ್ನನ್ನು ಸಮರ್ಥಿಸಿಕೊಂಡು ಬರೆದರು. ಕೆ.ಪಿ. ಪೂರ್ಣ­­ಚಂದ್ರ ತೇಜಸ್ವಿ ಪ್ರೋತ್ಸಾಹಿಸಿದರು. ಆಗಲೇ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆಯಲು ಸಂಕಲ್ಪ ಮಾಡಿದ್ದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.