ಗುಲ್ಬರ್ಗ:ನಗರ ಹೊರವಲಯದಲ್ಲೊಂದು ಶತಮಾನಗಳಷ್ಟು ಹಳೆಯದಾದ ಕಹಿಯಿಲ್ಲದ ಬೇವಿನ ಮರವಿದ್ದು, ಅನೇಕ ವರ್ಷಗಳಿಂದ ಜನರು ಬೇವಿನ ಎಲೆಗಳನ್ನು ಜಗಿದು ಅಚ್ಚರಿ ಪಡುತ್ತಿದ್ದಾರೆ. ‘ಕಹಿ ಬಿತ್ತಿ, ಸಿಹಿ ಫಲ ಅಪೇಕ್ಷಿಸಬಹುದೆ’ ಎನ್ನುವ ಗಾದೆ ಮಾತಿಗೆ ಇದು ಅಪವಾದವಾಗಿದೆ.
ಗುಲ್ಬರ್ಗದಿಂದ ಹುಮನಾಬಾದ್ ರಸ್ತೆ ಮಾರ್ಗದಲ್ಲಿ ಸ್ವಾಮಿ ಸಮರ್ಥ ಮಹಾರಾಜರ ದೇವಸ್ಥಾನದ ಗುಡ್ಡವಿದೆ. ದೇವಸ್ಥಾನದ ಅಂಗಳದಲ್ಲಿ ಅನೇಕ ಬೇವಿನ ಮರಗಳಿದ್ದರೂ ಒಂದು ಮರದ ಬೇವು ಮಾತ್ರ ಕಹಿ ಇಲ್ಲ. ಸ್ವಲ್ಪ ಒಗರಾಗಿದ್ದು, ಎಲೆಗಳನ್ನು ಜಗಿಯುವಾಗ ಮುಖ ಸಿಂಡರಿಸುವ ಅನುಭವವಾಗುದಿಲ್ಲ.
ಈ ಮರಕ್ಕೆ ಆಧ್ಯಾತ್ಮಿಕ ಹಿನ್ನೆಲೆಯಿದ್ದು, ಇಲ್ಲಿಗೆ ಬರುವ ಭಕ್ತರು ಅದರ ಎಲೆಗಳನ್ನು ಜಗಿದು ಧನ್ಯತಾ ಭಾವ ಹೊಂದುತ್ತಿದ್ದಾರೆ.
ಸಸ್ಯಶಾಸ್ತ್ರರ ವಿಶ್ಲೇಷಣೆಯ ಪ್ರಕಾರ ‘ಲಕ್ಷಕ್ಕೊಂದು ಬೇವಿನ ಮರ ಈ ರೀತಿ ಕಹಿ ಕಳೆದುಕೊಳ್ಳುವ ಸಾಧ್ಯತೆ ಇದೆ. ಅಡ್ಡ ಕಸಿಯ ಪರಿಣಾಮದಿಂದ ಬೇವಿನ ಗಿಡದ ಕಹಿ ಕಡಿಮೆಯಾಗಿರುತ್ತದೆ. ಇದನ್ನು ಪವಾಡ ಎಂದು ಪರಿಗಣಿಸಬಾರದು. ಬೇವಿನ ಎಲೆಗಳನ್ನು ಪರೀಕ್ಷಿಸುತ್ತಾ ಹೋದರೆ, ಖಂಡಿತವಾಗಿಯೂ ಬೇರೆ ಕಡೆಗಳಲ್ಲೂ ಕಹಿಯಿಲ್ಲದ ಬೇವಿನ ಮರ ಸಿಗುತ್ತದೆ’ ಎನ್ನುತ್ತಾರೆ.
‘ಶಿರಡಿ ಸಾಯಿಬಾಬಾ ಅವರ ಸಮಕಾಲೀನವರಾದ ಸ್ವಾಮಿ ಸಮರ್ಥ ಮಹಾರಾಜರ ಮೂಲ ಮಹಾರಾಷ್ಟ್ರದ ಅಕ್ಕಲಕೋಟ. 1858ರಲ್ಲಿ ಗುಲ್ಬರ್ಗ ಹೊರವಲಯದ ಈ ಗುಡ್ಡಕ್ಕೆ ಭೇಟಿ ನೀಡಿದ್ದರು. 1991ರ ವರೆಗೂ ಈ ಬಗ್ಗೆ ಸ್ಥಳೀಯರಿಗೆ ಯಾವುದೇ ವಿಷಯ ಗೊತ್ತಿರಲಿಲ್ಲ. ಶಂಕರ ಮಹಾರಾಜ ಎನ್ನುವ ಸ್ವಾಮಿಗಳು ಸಂಚಾರ ಮಾಡುತ್ತಾ ಬಂದು, ಈ ಬೇವಿನ ಮರವನ್ನು ಪೂಜಿಸಿದರು.
ಸ್ವಾಮಿ ಸಮರ್ಥರು ಇಲ್ಲಿಗೆ ಭೇಟಿ ನೀಡಿದ್ದನ್ನು ಸ್ಮರಿಸಿಕೊಂಡು, ಶಂಕರ ಮಹಾರಾಜರೆ ಸಮರ್ಥ ಮಹಾರಾಜರ ದೇವಸ್ಥಾನವೊಂದನ್ನು ನಿರ್ಮಿಸಿದರು. ಅನಂತರ ಈ ಬೇವಿನ ಮರ ಕಹಿಯಾಗಿಲ್ಲ ಎನ್ನುವ ವಿಷಯ ಬೆಳಕಿಗೆ ಬಂತು’ ಎನ್ನುತ್ತಾರೆ ಶ್ರೀ ಸ್ವಾಮಿ ಸಮರ್ಥ ಸೇವಾ ಕಲ್ಯಾಣ ಕೇಂದ್ರದ ಕಾರ್ಯದರ್ಶಿ ಬಸವರಾಜ ಮಾಡಗಿ.
‘ಇದೊಂದು ಪವಾಡ ಎಂದು ಎಲ್ಲೂ ಪ್ರಚಾರ ಮಾಡಿಲ್ಲ. ಆದರೆ ಜನರಿಂದ ವಿಷಯ ಹರಡಿದೆ. ಬಂದ ಜನರೆಲ್ಲ ಬೇವಿನ ಮರದ ಎಲೆಗಳನ್ನು ಕಡಿದು, ಈಗ ಕೈಗೆ ಬೇವಿನ ಎಲೆಗಳು ನಿಲುಕದಷ್ಟು ಎತ್ತರಕ್ಕೆ ಹೋಗಿವೆ. ಸಸ್ಯಶಾಸ್ತ್ರಜ್ಞರು, ಸಂಶೋಧಕರು ಕುತೂಹಲದಿಂದ ಬಂದು ಹೋಗಿದ್ದಾರೆ. ಬೇವಿನ ಗಿಡ ಹಾಳಾಗದಂತೆ ಅದರ ಸುತ್ತ ಕಟ್ಟೆ ನಿರ್ಮಿಸಲಾಗಿದೆ. ಬೇರೆ ಕಡೆಗೆ ಇಂತಹ ಮರ ಇದೆಯೋ ಇಲ್ಲವೋ ನಮಗೂ ಗೊತ್ತಿಲ್ಲ’ ಎಂದರು.
ಸ್ವಾಮಿ ಸಮರ್ಥ ದೇವಸ್ಥಾನಕ್ಕೆ ಮಹಾರಾಷ್ಟ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ದೇವಸ್ಥಾನಕ್ಕೆ ಯಾವುದೇ ಸ್ವಾಮಿಗಳಿಲ್ಲ. ಆಡಳಿತ ಮಂಡಳಿಯಿಂದ ದೇವಸ್ಥಾನವನ್ನು ನಿರ್ವಹಿಸಲಾಗುತ್ತದೆ. ಗೋವು ಸಾಕಾಣಿಕೆ, ಪತ್ರಿ ವನ, ರುದ್ರಾಕ್ಷಿ ವನಗಳನ್ನು ನಿರ್ಮಿಸಲಾಗಿದೆ. ಮುಖ್ಯವಾಗಿ ಭಕ್ತರು ಜನವರಿ ಹಾಗೂ ಎಳ್ಳಮವಾಸ್ಯೆಯಂದು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ದೇವಸ್ಥಾನದಲ್ಲಿ ಸದಾಕಾಲ ಅನ್ನಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ.
‘ದೇಶದ ಪ್ರಮುಖ ಗೋವು ತಳಿಗಳನ್ನು ಇಲ್ಲಿ ಸಂರಕ್ಷಿಸಿ ಅಭಿವೃದ್ಧಿಗೊಳಿಸಲಾಗುತ್ತಿದೆ. ಸಾರ್ವಜನಿಕರು ನೀಡುವ ದೇಣಿಗೆಯಿಂದಲೇ ಈ ಎಲ್ಲ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ರಾಜ್ಯ ಸರ್ಕಾರ ಕೂಡಾ ಗೋವು ಸಂರಕ್ಷಣೆಗೆ ನೆರವು ನೀಡಿದೆ’ ಎನ್ನುತ್ತಾರೆ ಸೇವಾ ಕೇಂದ್ರದ ಪ್ರಧಾನ ಕಾರ್ಯದರ್ಶಿ ಡಿ.ವಿ. ಪಾಟೀಲ್.
ವಿಶೇಷ: ಯುಗಾದಿ ಹಬ್ಬದ ದಿನ ಕಷ್ಟದ ಸಂಕೇತವಾಗಿ ಬೇವಿನ ಕಹಿಯನ್ನು ಎಲ್ಲ ಕಡೆಗಳಲ್ಲೂ ಸೇವಿಸಲಾಗುತ್ತದೆ.
ಆದರೆ ಗುಲ್ಬರ್ಗದ ದೇವಸ್ಥಾನದಲ್ಲಿ ವರ್ಷವಿಡೀ ಸುಖ ಜೀವನ ಕರುಣಿಸುವಂತೆ ಜನರು ಬೇಡಿಕೊಂಡು ಕಹಿಯಿಲ್ಲದ ಬೇವು ಸೇವಿಸುತ್ತಿರುವುದು ವಿಶೇಷ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.