ADVERTISEMENT

ಚರ್ಚೆಗೆ ಮಥಾಯಿ ಕರೆದ ಮುಖ್ಯ ಕಾರ್ಯದರ್ಶಿ

​ಪ್ರಜಾವಾಣಿ ವಾರ್ತೆ
Published 26 ಮೇ 2017, 20:32 IST
Last Updated 26 ಮೇ 2017, 20:32 IST
ಕೆ. ಮಥಾಯಿ
ಕೆ. ಮಥಾಯಿ   

ಬೆಂಗಳೂರು: ‘ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ. ಲಕ್ಷ್ಮೀನಾರಾಯಣ ಸೇರಿದಂತೆ ನಾಲ್ವರು ಐಎಎಸ್ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ’ ಎಂದು ಆರೋಪಿಸಿ  ಲೋಕಾಯುಕ್ತಕ್ಕೆ ದೂರು ನೀಡಿದ್ದ ಕೆಎಎಸ್‌ ಅಧಿಕಾರಿ (ಸಕಾಲ  ಯೋಜನೆ ಆಡಳಿತಾಧಿಕಾರಿ) ಕೆ. ಮಥಾಯಿ ಅವರನ್ನು ಸರ್ಕಾರ ಮಾತುಕತೆಗೆ ಕರೆದಿದೆ.

ಮುಖ್ಯ ಕಾರ್ಯದರ್ಶಿ ಸುಭಾಷ್‌ಚಂದ್ರ ಖುಂಟಿಆ ಅವರು ಶುಕ್ರವಾರ ಸಂಜೆ 4 ಗಂಟೆಗೆ ಭೇಟಿಯಾಗುವಂತೆ  ಮಥಾಯಿ ಅವರಿಗೆ ಸಂದೇಶ ಕಳುಹಿಸಿದ್ದರು.  ಮಥಾಯಿ ಶುಕ್ರವಾರ ಮತ್ತು ಶನಿವಾರ ರಜೆಯಲ್ಲಿರುವ ಕಾರಣ ಭೇಟಿ ಸಾಧ್ಯವಾಗಿಲ್ಲ. ಸೋಮವಾರ ಮಾತುಕತೆ ನಡೆಸುವ ಸಾಧ್ಯತೆ ಇದೆ.
‘ಸರ್ಕಾರಕ್ಕೆ ಆಗುತ್ತಿರುವ ಮುಜುಗರ ತಪ್ಪಿಸಲು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು  ನೀಡಿರುವ ಸೂಚನೆಯಂತೆ ಮಥಾಯಿ ಅವರನ್ನು ಮುಖ್ಯ
ಕಾರ್ಯದರ್ಶಿ ಮಾತುಕತೆಗೆ ಕರೆದಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಸಕಾಲ ಯೋಜನೆ ನಿರ್ದೇಶಕಿಜಿ. ಕಲ್ಪನಾ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಕೆ. ಅನಿಲ್‌ಕುಮಾರ್‌ ಮತ್ತು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಇ.ವಿ. ರಮಣರೆಡ್ಡಿ ಅವರ ವಿರುದ್ಧ  ಮಥಾಯಿ ಲೋಕಾಯುಕ್ತಕ್ಕೆ ಬುಧವಾರ ದೂರು ನೀಡಿದ್ದರು.

‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (ಬಿಬಿಎಂಪಿ) ನಡೆದಿರುವ ₹2,000 ಕೋಟಿ ಮೊತ್ತದ ಜಾಹೀರಾತು ಹಗರಣದ ಸಂಬಂಧ ನಾನು ನೀಡಿದ್ದ ವರದಿಯಲ್ಲಿ ಎಂ. ಲಕ್ಷ್ಮೀನಾರಾಯಣ ಅವರ ಹೆಸರು ದಾಖಲಿಸಿದ್ದ ಕಾರಣಕ್ಕೇ ಕಿರುಕುಳ ಆರಂಭವಾಗಿದೆ’ ಎಂದು ಅವರು ದೂರಿನಲ್ಲಿ ಆರೋಪಿಸಿದ್ದರು.
*
ಕೆ. ಮಥಾಯಿ  ಶುಕ್ರವಾರ ರಜೆಯಲ್ಲಿದ್ದರು. ಬಂದ ನಂತರ ಕರೆದು ಮಾತನಾಡುತ್ತೇನೆ.
ಸುಭಾಷ್‌ಚಂದ್ರ ಖುಂಟಿಆ
ಮುಖ್ಯ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.