ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಟಿ.ವಿ. ಗುರುಮೂರ್ತಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಕನಕಪುರ ರಸ್ತೆಯ ತಮ್ಮ ನಿವಾಸದಲ್ಲಿದ್ದಾಗ ಶುಕ್ರವಾರ ಸಂಜೆ ಹೃದಯಾಘಾತ ಸಂಭವಿಸಿದ್ದು, ಕೂಡಲೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂಧಿಸದೆ ಕೊನೆಯುಸಿರೆಳೆದಿದ್ದಾರೆ.
ಗುರುಮೂರ್ತಿ ಅವರಿಗೆ ಪತ್ನಿ ಪೂರ್ಣಿಮಾ, ಪುತ್ರರಾದ ಜಯಂತ್, ನಿಶಾಂತ್ ಇದ್ದಾರೆ. ಹಿರಿಯ ಪುತ್ರ ವಿದೇಶ ಪ್ರವಾಸದಲ್ಲಿರುವುದರಿಂದ ಹಿಂದಿರುಗಿ ಬಂದ ನಂತರ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.
ತೂಮಕೂರು ಜಿಲ್ಲೆಯ ತಿಪಟೂರಿನವರಾದ ಗುರುಮೂರ್ತಿ ಅವರು, ಕನ್ನಡ ಚಿತ್ರರಂಗದಲ್ಲಿ ‘ಗುರುಮಾಮ’ ಎಂದೇ ಹೆಸರು ಪಡೆದಿದ್ದರು. ‘ಮುಕ್ತಮುಕ್ತ’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು. ಕನ್ನಡದ ಕಂಠಿ, ಜಗ್ಗುದಾದ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರು.
ಗುರುಮೂರ್ತಿ ಅವರು ಹೆಚ್ಚಾಗಿ ಪೋಷಕ ಪಾತ್ರ ಹಾಗೂ ಹಾಸ್ಯ ಪಾತ್ರಗಳಲ್ಲಿ ಅಭಿನಯಿಸಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.