ಬೆಂಗಳೂರು: ದಲಿತರ ಅಭಿವೃದ್ಧಿಗೆ ದುಡಿದವರಿಗೆ ರಾಜ್ಯ ಸರ್ಕಾರ ನೀಡುವ ಪ್ರತಿಷ್ಠಿತ ‘ಬಾಬು ಜಗಜೀವನ ರಾಂ’ ಪ್ರಶಸ್ತಿಗೆ ಚಿತ್ರದುರ್ಗದ ದಲಿತ ಮುಖಂಡ ಎಂ.ಜಯಣ್ಣ ಅವರನ್ನು ಆಯ್ಕೆ ಮಾಡಲಾಗಿದೆ.
ಪ್ರಶಸ್ತಿಯು ₹5 ಲಕ್ಷ ನಗದು, ಬಂಗಾರದ ಪದಕ ಹಾಗೂ ಪ್ರಶಂಸಾ ಪತ್ರ ಒಳಗೊಂಡಿದೆ. ಮಂಗಳವಾರ ವಿಧಾನಸೌಧದಲ್ಲಿ ನಡೆಯುವ ಜಗಜೀವನರಾಂ ಅವರ 109ನೇ ಜನ್ಮ ದಿನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಸೋಮವಾರ ತಿಳಿಸಿದರು.
ಪ್ರಶಸ್ತಿ ಆಯ್ಕೆಗಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಎಲ್.ಹನುಮಂತಯ್ಯ ಅಧ್ಯಕ್ಷತೆಯ ಸಮಿತಿಯನ್ನು ರಚಿಸಲಾಗಿತ್ತು.
ಹಸ್ತಕ್ಷೇಪ ನಡೆದಿಲ್ಲ: ಇದೇ ಸಂದರ್ಭದಲ್ಲಿ ಹನುಮಂತಯ್ಯ ಅವರು ಸುದ್ದಿಗಾರರ ಜತೆ ಮಾತನಾಡಿ, ‘ಪ್ರಶಸ್ತಿಗಾಗಿ ಒಟ್ಟು 71 ಮಂದಿ ಅರ್ಜಿ ಸಲ್ಲಿಸಿದ್ದರು. ಈ ಬಾರಿ, ಅರ್ಜಿ ಸಲ್ಲಿಸದ ಪ್ರಮುಖರನ್ನೂ ಪ್ರಶಸ್ತಿಗೆ ಗುರುತಿಸುವ ಕೆಲಸ ಮಾಡಲಾಯಿತು. ಅಲ್ಲಿ ಆಯ್ಕೆಯಾಗಿದ್ದೇ ಜಯಣ್ಣನವರ ಹೆಸರು’ ಎಂದು ಹೇಳಿದರು. ‘ಸಮಾಜ ಕಲ್ಯಾಣ ಸಚಿವರು ಇದರಲ್ಲಿ ಹಸ್ತಕ್ಷೇಪ ಮಾಡಿಲ್ಲ’ಎಂದರು.
ನಿರಂತರ ಹೋರಾಟಗಾರ
1970–80ರ ದಶಕದಲ್ಲಿ ರಾಜ್ಯದಲ್ಲಿ ದಲಿತ ಸಂಘರ್ಷ ಸಮಿತಿಯನ್ನು ತಳಮಟ್ಟದಿಂದ ಕಟ್ಟಿದ ಪ್ರಮುಖರಲ್ಲಿ ಜಯಣ್ಣ ಒಬ್ಬರು. ಪ್ರೊ.ಬಿ.ಕೃಷ್ಣಪ್ಪ ಅವರ ನೇತೃತ್ವದಲ್ಲಿ ದಲಿತಪರ ಹೋರಾಟ ಆರಂಭಿಸಿದರು. ಚಿತ್ರದುರ್ಗದಿಂದ ಆರಂಭಿಸಿದ ಈ ಹೋರಾಟವನ್ನು ನಾಡಿನಾದ್ಯಂತ ವಿಸ್ತರಿಸಿದರು. ಅವರು ಜಿಲ್ಲೆಯ ಭದ್ರಾ ಮೇಲ್ದಂಡೆ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷರೂ ಆಗಿದ್ದಾರೆ.
‘ಹೆಂಡ ಬೇಡ, ಹೋಬಳಿಗೊಂದು ವಸತಿಶಾಲೆ ನೀಡಿ’ ಎಂಬ ಘೋಷಣೆಯೊಂದಿಗೆ ರಾಜ್ಯಮಟ್ಟದ ಹೋರಾಟ ಮಾಡಿದ್ದು, ಜಯಣ್ಣ ಅವರ ಹೋರಾಟದ ಹೆಜ್ಜೆಗಳಲ್ಲಿ ಪ್ರಮುಖವಾದದು. ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷನಾಗಿ, ಪ್ರತಿಭಟನೆ, ಹೋರಾಟ, ನಡಿಗೆ ಜಾಥಾ, ಜಾಗೃತಿ ಯಾತ್ರೆಗಳ ಮೂಲಕ ಜಿಲ್ಲೆಗೆ ನೀರು ಹರಿಸಲು ನಡೆಸಿದ ಪ್ರಯತ್ನ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.