ಬೆಂಗಳೂರು/ಬೆಳಗಾವಿ/ಗೋಕಾಕ: ರಾಜೀನಾಮೆ ಹಿಂದಕ್ಕೆ ಪಡೆಯುವಂತೆ ಅಬಕಾರಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಮನವೊಲಿಸಲು ಬುಧವಾರ ಇಡೀ ದಿನ ನಡೆಸಿದ ಕಸರತ್ತು ಫಲಿಸಿಲ್ಲ. ಆಪ್ತ ಸಚಿವರ ರಾಜೀನಾಮೆ ಪಟ್ಟಿನಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಕ್ಕಟ್ಟಿಗೆ ಸಿಲುಕಿದ್ದಾರೆ.
ಫ್ಯಾಕ್ಸ್ ಮೂಲಕ ಮಂಗಳವಾರ ರಾಜೀನಾಮೆ ರವಾನಿಸಿದ್ದ ಸತೀಶ್, ಬೆಳಗಾವಿಯಲ್ಲೇ ಉಳಿದುಕೊಂಡಿದ್ದಾರೆ. ಬೆಂಗಳೂರಿನಿಂದ ಸಂಧಾನಕ್ಕೆ ತೆರಳಿದ್ದ ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಅವರೊಂದಿಗೆ ಸಚಿವರು ಚರ್ಚೆಗೆ ನಿರಾಕರಿಸಿದ್ದಾರೆ. ಜಿಲ್ಲಾ ಕಾಂಗ್ರೆಸ್ ಮುಖಂಡರ ಜೊತೆ ದೀರ್ಘಕಾಲ ಚರ್ಚಿಸಿದ್ದರೂ, ಮುಂದಿನ ನಡೆಯ ಕುರಿತು ಗುಟ್ಟು ಬಿಟ್ಟುಕೊಟ್ಟಿಲ್ಲ.
ಕೆಂಪಯ್ಯ ವಿರುದ್ಧ ಗರಂ: ಕೆಂಪಯ್ಯ ಅವರು ಮುಖ್ಯಮಂತ್ರಿಯವರ ಸಂದೇಶ ಹೊತ್ತು ಬೆಳಿಗ್ಗೆಯೇ ಬೆಳಗಾವಿಗೆ ತೆರಳಿದ್ದರು. ಅಲ್ಲಿನ
ಸಿ.ಎಂ. ಭೇಟಿ ಅನುಮಾನ |
ಬೆಳಗಾವಿ: ಅಬಕಾರಿ ಸಚಿವ ಸತೀಶ ಜಾರಕಿಹೊಳಿ ಅವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಬೆಂಗಳೂರಿಗೆ ತೆರಳುವುದು ಇನ್ನೂ ಅಸ್ಪಷ್ಟವಾಗಿದೆ. ಬುಧವಾರ ಅವರು ಬೆಂಗಳೂರಿಗೆ ತೆರಳಲು ವಿಮಾನದ ಟಿಕೆಟ್ ಕಾಯ್ದಿರಿಸಿದ್ದರು. ಆದರೆ, ಪ್ರಯಾಣ ಮೊಟಕುಗೊಳಿಸಿ ಮರಳಿ ಗೋಕಾಕದ ನಿವಾಸಕ್ಕೆ ಹೋಗಿದ್ದಾರೆ. ತಮ್ಮ ಮೊಬೈಲ್ ಸಂಪರ್ಕ ಸ್ಥಗಿತಗೊಳಿಸಿರುವ ಜಾರಕಿಹೊಳಿ, ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಬೆಂಗಳೂರಿಗೆ ಹೋಗುವುದಿಲ್ಲ ಎಂದು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆನ್ನಲಾಗಿದೆ. |
ಪೊಲೀಸ್ ಕಮಿಷನರ್ ಎಸ್.ರವಿ ಅವರೊಂದಿಗೆ ಗೋಕಾಕಕ್ಕೆ ತೆರಳಿ ಅಬಕಾರಿ ಸಚಿವರ ಜೊತೆ ಮಾತುಕತೆಗೆ ಯತ್ನಿಸಿದರು. ಕೆಂಪಯ್ಯ ಅವರೊಂದಿಗೆ ಚರ್ಚೆಗೆ ನಿರಾಕರಿಸಿದ ಸಚಿವರು, ವಾಪಸು ಹೋಗುವಂತೆ ತಾಕೀತು ಮಾಡಿದರು.
‘ನನ್ನ ಮನವೊಲಿಕೆ ಮಾಡಲು ನೀವು ಯಾರು? ನೀವು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಪ್ರತಿನಿಧಿಯೇ? ನನ್ನ ರಾಜೀನಾಮೆ ಬಗ್ಗೆ ನೀವು ಏನೂ ಹೇಳುವ ಅವಶ್ಯಕತೆ ಇಲ್ಲ. ನಿಮ್ಮಿಂದ ನಾವು ಏನನ್ನೂ ಕೇಳಬೇಕಾಗಿಲ್ಲ’ ಎಂದು ಸತೀಶ್ ಗೃಹ ಸಚಿವರ ಸಲಹೆಗಾರರಿಗೆ ರೇಗಿದರು ಎಂದು ಮೂಲಗಳು ತಿಳಿಸಿವೆ.
ನಾಲ್ಕೂವರೆ ಗಂಟೆ ಚರ್ಚೆ: ಬಳಿಕ ಗೋಕಾಕದಿಂದ ಬೆಳಗಾವಿಗೆ ಬಂದ ಅಬಕಾರಿ ಸಚಿವರು ಶಾಸಕ ಫಿರೋಜ್ ಸೇಟ್ ನಿವಾಸಕ್ಕೆ ತೆರಳಿದರು. ಅಲ್ಲಿ ಹಾಜರಿದ್ದ ಪಕ್ಷದ ಶಾಸಕರು ಮತ್ತು ಜಿಲ್ಲಾ ಕಾಂಗ್ರೆಸ್ ಮುಖಂಡರ ಜೊತೆ ಸತತ ನಾಲ್ಕೂವರೆ ಗಂಟೆಗಳ ಕಾಲ ಚರ್ಚೆ ನಡೆಸಿದರು.
ಸಚಿವರ ಅಣ್ಣ ರಮೇಶ್ ಜಾರಕಿಹೊಳಿ, ಸಂಸದ ಪ್ರಕಾಶ್ ಹುಕ್ಕೇರಿ ಸೇರಿದಂತೆ ಸಭೆಯಲ್ಲಿದ್ದ ಎಲ್ಲರೂ ರಾಜೀನಾಮೆ ಹಿಂದಕ್ಕೆ ಪಡೆಯುವಂತೆ ಸತೀಶ್ ಅವರ ಮನವೊಲಿಕೆಗೆ ಪ್ರಯತ್ನಿಸಿದರು. ಸಭೆಯಲ್ಲಿದ್ದವರ ದೂರವಾಣಿಗೆ ಕರೆ ಮಾಡಿದ ಕಾಂಗ್ರೆಸ್ನ ಕೆಲ ಪ್ರಮುಖರು, ಸಚಿವರ ಜೊತೆಗೆ ಮಾತುಕತೆಗೆ ಯತ್ನಿಸಿದ್ದಾರೆ.
ಸಿಎಂ ಜೊತೆ ಚರ್ಚಿಸಿ ನಿರ್ಧಾರ: ಸಭೆಯ ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ಸತೀಶ್, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಚರ್ಚೆಗೆ ಕರೆದಿದ್ದಾರೆ. ಗುರುವಾರ ಬೆಂಗಳೂರಿಗೆ ತೆರಳಿ ಅವರೊಂದಿಗೆ ಮಾತನಾಡಿದ ನಂತರ ಮುಂದಿನ ನಿರ್ಧಾರ ಪ್ರಕಟಿಸುತ್ತೇನೆ’ ಎಂದು ಹೇಳಿದರು.
‘ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ನಿರ್ಧಾರಕ್ಕೆ ಈಗಲೂ ನಾನು ಬದ್ಧ. ಮುಖ್ಯಮಂತ್ರಿ ಜೊತೆಗೆ ಚರ್ಚಿಸಿದ ನಂತರ ಮುಂದಿನ ನಡೆ ಕುರಿತು ಹೇಳುತ್ತೇನೆ. ರಾಜೀನಾಮೆಯನ್ನು ಹಿಂಪಡೆಯುವ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ’ ಎಂದು ಸ್ಪಷ್ಟಪಡಿಸಿದರು.
‘ಪಕ್ಷಕ್ಕೆ ಮುಜುಗರ ತಪ್ಪಿಸಲು ನಿರ್ಧಾರ ಬದಲಿಸುವಂತೆ ಸಿದ್ದರಾಮಯ್ಯ, ಸಚಿವರಾದ ಡಾ. ಎಚ್.ಸಿ. ಮಹದೇವಪ್ಪ, ಡಿ.ಕೆ. ಶಿವಕುಮಾರ್ ದೂರವಾಣಿ ಮೂಲಕ ಮನವಿ ಮಾಡಿದ್ದಾರೆ. ಸಂಸದ ಪ್ರಕಾಶ ಹುಕ್ಕೇರಿ, ಶಾಸಕರಾದ ಫಿರೋಜ್ ಸೇಠ್, ರಮೇಶ ಜಾರಕಿಹೊಳಿ, ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಹಲವರು ರಾಜೀನಾಮೆ ಹಿಂದಕ್ಕೆ ಪಡೆಯಲು ಕೋರಿದ್ದಾರೆ’ ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ! |
ಬೆಳಗಾವಿ: ಅಬಕಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಮನವೊಲಿಸಲು ನಡೆದ ಜಿಲ್ಲೆಯ ಶಾಸಕರು, ಮುಖಂಡರ ಸಭೆಗೆ ಜಿಲ್ಲಾಧಿಕಾರಿ ಎನ್. ಜಯರಾಂ ಬಂದು ಅಚ್ಚರಿ ಉಂಟು ಮಾಡಿದರು. ಸುಮಾರು 45 ನಿಮಿಷಗಳ ಕಾಲ ಸಚಿವರೊಂದಿಗೆ ಜಿಲ್ಲಾಧಿಕಾರಿಗಳು ಚರ್ಚಿಸಿದರು. ಆದರೆ, ಯಾವ ವಿಷಯ ಕುರಿತು ಮಾತುಕತೆ ನಡೆಸಿದರು ಎಂಬುದು ತಿಳಿದಿಲ್ಲ. ‘ಕೆಡಿಪಿ ಸಭೆಯ ದಿನಾಂಕ ನಿಗದಿ ಕುರಿತು ಸಚಿವರೊಂದಿಗೆ ಚರ್ಚಿಸಲು ಬಂದಿದ್ದೆ’ ಎಂದು ಜಯರಾಂ ನಂತರ ಪತ್ರಕರ್ತರಿಗೆ ತಿಳಿಸಿದರು. |
‘ನನ್ನಿಂದ ಯಾರಿಗೂ ತೊಂದರೆ ಆಗಬಾರದು. ರಾಜೀನಾಮೆ ಹಿಂದಕ್ಕೆ ಪಡೆಯಲು ಯಾವುದೇ ಬೇಡಿಕೆ ಇಟ್ಟಿಲ್ಲ. ಖಾತೆ ಬದಲಾವಣೆ ಪ್ರಶ್ನೆ ಇಲ್ಲ. ಸಮಾಜ ಸೇವೆಗೆ ಸಮಯಾವಕಾಶ ಸಿಗುತ್ತಿಲ್ಲ ಎಂಬ ಕಾರಣಕ್ಕೆ ರಾಜೀನಾಮೆ ನೀಡಿದ್ದೇನೆ. ಪಕ್ಷ ಹಾಗೂ ಮುಖ್ಯಮಂತ್ರಿಗಳ ವಿರುದ್ಧ ಯಾವುದೇ ಅಸಮಾಧಾನ, ಮುನಿಸು ಇಲ್ಲ. ನನ್ನ ಸಮಸ್ಯೆಗಳನ್ನು ಮುಖ್ಯಮಂತ್ರಿಗಳಿಗೆ ವಿವರಿಸುವುದು ನನ್ನ ಕರ್ತವ್ಯವಾಗಿದೆ. ಆದ್ದರಿಂದ ನಾಳೆ ಜಿಲ್ಲೆಯ ಮುಖಂಡರೊಂದಿಗೆ ಬೆಂಗಳೂರಿಗೆ ತೆರಳಿ ಅವರನ್ನು ಭೇಟಿಯಾಗುತ್ತೇನೆ’ ಎಂದರು.
‘ಮನವೊಲಿಸಲು ಪ್ರಯತ್ನ’: ಸತೀಶ್ ಅವರು ಆತುರದಿಂದ ರಾಜೀನಾಮೆ ನಿರ್ಧಾರ ಕೈಗೊಂಡಿದ್ದಾರೆ. ರಾಜೀನಾಮೆ ಹಿಂದಕ್ಕೆ ಪಡೆಯುವಂತೆ ಅವರನ್ನು ಮನವೊಲಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ‘ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಫ್ಯಾಕ್ಸ್ ಮೂಲಕ ಕಳುಹಿಸಿರುವ ಪತ್ರ ನನಗೆ ತಲುಪಿದೆ. ರಾಜೀನಾಮೆ ಹಿಂದಿನ ಕಾರಣ ತಿಳಿದಿಲ್ಲ. ಅವರು ತುಂಬಾ ಸೂಕ್ಷ್ಮ ಮನಸ್ಸಿನವರು. ಅವರ ಜೊತೆ ಮಾತನಾಡಿದ್ದೇನೆ. ಬೆಂಗಳೂರಿಗೆ ಬರುವಂತೆ ಹೇಳಿದ್ದೇನೆ. ಅವರ ಜೊತೆ ಖುದ್ದಾಗಿ ಮಾತನಾಡಿ ರಾಜೀನಾಮೆ ಹಿಂದಕ್ಕೆ ಪಡೆಯುವಂತೆ ಮನವೊಲಿಸುವೆ’ ಎಂದರು.
‘ಖಾತೆ ಬದಲಾವಣೆ ಮಾಡುವಂತೆ ಅವರು ಇತ್ತೀಚೆಗೆ ಮನವಿ ಮಾಡಿದ್ದು ನಿಜ. ಸಂಪುಟ ಪುನರ್ರಚನೆ ಸಂದರ್ಭದಲ್ಲಿ ಈ ಬೇಡಿಕೆಯನ್ನು ಪರಿಗಣಿಸುವುದಾಗಿ ಭರವಸೆ ನೀಡಿದ್ದೆ’ ಎಂದು ತಿಳಿಸಿದರು.
ಖಾತೆಗೆ ಬೇಡಿಕೆ ಸಲ್ಲದು: ಸಚಿವರ ರಾಜೀನಾಮೆ ಪ್ರಕರಣ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್, ‘ಸತೀಶ್ ಅವರು ರಾಜೀನಾಮೆ ಪತ್ರದ ಒಂದು ಪ್ರತಿಯನ್ನು ನನಗೂ ಕಳುಹಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಯವರ ಜೊತೆ ಚರ್ಚೆ ನಡೆಸುತ್ತೇನೆ’ ಎಂದರು.
‘ಸಚಿವರಾದವರು ಯಾವುದೇ ಖಾತೆ ಕೊಟ್ಟರೂ ಸಮರ್ಥವಾಗಿ ಕೆಲಸ ಮಾಡಬೇಕು. ನಿರ್ದಿಷ್ಟ ಖಾತೆಗಾಗಿ ಬೇಡಿಕೆ ಇಡುವುದು ಸರಿಯಲ್ಲ. ಏನಾದರೂ ಸಮಸ್ಯೆಗಳಿದ್ದಲ್ಲಿ ಮುಖ್ಯಮಂತ್ರಿಯವರ ಬಳಿ ಹೋಗಿ ಚರ್ಚಿಸಬೇಕು’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.