ADVERTISEMENT

ಡಾ. ಕಲಬುರ್ಗಿ ಹತ್ಯೆ: ಹಂತಕರ ಪತ್ತೆಗೆ ಸಾಹಿತಿಗಳ ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಮೇ 2016, 19:30 IST
Last Updated 24 ಮೇ 2016, 19:30 IST

ಬೆಂಗಳೂರು: ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ ಹತ್ಯೆ ಪ್ರಕರಣವು ಮಹಾರಾಷ್ಟ್ರದ ನರೇಂದ್ರ ದಾಭೋಲ್ಕರ್ ಮತ್ತು ಗೋವಿಂದ ಪಾನ್ಸರೆ ಅವರ ಹತ್ಯೆ ಪ್ರಕರಣಗಳಂತೆ ಮುಚ್ಚಿಹೋಗುವ ಸೂಚನೆ ಇದೆ ಎಂಬ ಆತಂಕವನ್ನು ಸಾಹಿತಿಗಳು, ಸಾಮಾಜಿಕ ಕಾರ್ಯಕರ್ತರು ವ್ಯಕ್ತಪಡಿಸಿದ್ದಾರೆ.

ಪ್ರೊ. ಚಂದ್ರಶೇಖರ ಪಾಟೀಲ, ಡಾ. ನರೇಂದ್ರ ನಾಯಕ್, ಡಾ. ಪಂಡಿತಾರಾಧ್ಯ, ಡಾ. ಹೇಮಾ ಪಟ್ಟಣಶೆಟ್ಟಿ, ವಸಂತ ಶೆಟ್ಟಿ, ಡಾ. ಸುಶಿ ಕಾಡನಕುಪ್ಪೆ ಅವರು ತಮ್ಮ ಆತಂಕವನ್ನು ವಿವರಿಸಿ ರಾಷ್ಟ್ರಪತಿ, ಪ್ರಧಾನಿ, ಕೇಂದ್ರ ಗೃಹ ಮಂತ್ರಿ, ರಾಜ್ಯಪಾಲ, ಮುಖ್ಯಮಂತ್ರಿ, ರಾಜ್ಯದ ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ.

ಪತ್ರದ ಸಾರ: ‘ಡಾ. ಕಲಬುರ್ಗಿಯವರ ಹತ್ಯೆಯಾಗಿ ಒಂಬತ್ತು ತಿಂಗಳುಗಳಾಗುತ್ತ ಬಂದಿದೆ. ಅವರ ಕೊಲೆಯಾಗಿದೆ ಎಂಬ ಸುದ್ದಿಯನ್ನು ಜೀರ್ಣಿಸಿಕೊಳ್ಳಲು ನಮಗೆ ಇಂದಿಗೂ ಆಗುತ್ತಿಲ್ಲ. ಡಾ. ಕಲಬುರ್ಗಿ ಹತ್ಯೆಯ ತನಿಖಾ ಜವಾಬ್ದಾರಿ ಹೊತ್ತಿರುವ ಸಿಐಡಿ, ದುಷ್ಕರ್ಮಿಗಳ ಬಗ್ಗೆ ಸ್ಪಷ್ಟವಾದ ಯಾವ ಮಾಹಿತಿಯನ್ನೂ ಇದುವರೆಗೆ ಜನರ ಮುಂದಿಟ್ಟಿಲ್ಲ. ದುಷ್ಕರ್ಮಿಗಳ ರೇಖಾಚಿತ್ರ ಬಿಡುಗಡೆಗೊಳಿಸಿದ್ದನ್ನು ಹೊರತುಪಡಿಸಿದರೆ ತನಿಖೆ ಯಾವ ಹಂತ ತಲುಪಿದೆ ಎಂಬುದು ಬಹಿರಂಗವಾಗಿಲ್ಲ. ಹತ್ಯೆಯ ಹಿಂದಿರುವ ಸ್ಪಷ್ಟ ಕಾರಣಗಳು ಇದುವರೆಗಿನ ತನಿಖೆಯಿಂದ ಗೊತ್ತಾಗದಿರುವುದು ಸಂಶಯ ಮೂಡುವಂತೆ ಮಾಡಿದೆ’.

‘ತನಿಖೆಯು ಅಂತಿಮ ಹಂತಕ್ಕೆ ಬಾರದೆ ಇರುವುದು ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತಿದೆ. ಹತ್ಯೆಯ ಹಿಂದಿರುವ ಶಕ್ತಿಗಳನ್ನು ಪತ್ತೆ ಹಚ್ಚುವುದೇ ರಾಜ್ಯ ಸರ್ಕಾರ ಕಲಬುರ್ಗಿ ಅವರಿಗೆ ಸಲ್ಲಿಸುವ ಗೌರವವಾಗುತ್ತದೆ. ಆದರೆ ತನಿಖೆ ಮೂಲಕ ಯಾವ ಸುಳಿವನ್ನೂ ಹೊರತೆಗೆಯದೇ ಇರುವುದರಿಂದ ಧಾರ್ಮಿಕ ಮೂಲಭೂತವಾದಿ ಶಕ್ತಿಗಳನ್ನು ಪರೋಕ್ಷವಾಗಿ ಬೆಂಬಲಿಸಿದಂತಾಗುತ್ತದೆ’.

‘ಈಗಲಾದರೂ  ಕಲಬುರ್ಗಿಯವರ ಹತ್ಯೆಯ ಹಿಂದಿರುವವರನ್ನು ಪತ್ತೆ ಮಾಡಬೇಕು’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.