ADVERTISEMENT

ಡಿಜಿಪಿಗೆ ದಾಖಲೆ ಕೇಳಿದ ಸಿಬಿಐ

ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2017, 19:30 IST
Last Updated 19 ಅಕ್ಟೋಬರ್ 2017, 19:30 IST
ಡಿಜಿಪಿಗೆ ದಾಖಲೆ ಕೇಳಿದ ಸಿಬಿಐ
ಡಿಜಿಪಿಗೆ ದಾಖಲೆ ಕೇಳಿದ ಸಿಬಿಐ   

ಬೆಂಗಳೂರು: ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ತಮ್ಮ ಸುಪರ್ದಿಗೆ ನೀಡುವಂತೆ ಸಿಬಿಐ ಅಧಿಕಾರಿಗಳು ಸಿಐಡಿ ಡಿಜಿಪಿ ಕಿಶೋರ್ ಚಂದ್ರ ಅವರಿಗೆ ಅ.16ರಂದು ಪತ್ರ ಬರೆದಿದ್ದಾರೆ.

ಪತ್ರದ ಬೆನ್ನಲ್ಲೇ ಅಧಿಕಾರಿಗಳ ಜತೆ ಸಭೆ ನಡೆಸಿರುವ ಕಿಶೋರ್ ಚಂದ್ರ, ತ್ವರಿತವಾಗಿ ದಾಖಲೆಗಳ ಹಸ್ತಾಂತರ ಮಾಡುವಂತೆ ಸೂಚಿಸಿದ್ದಾರೆ.

‘ತನಿಖಾ ವರದಿ, ವೈದ್ಯಕೀಯ ದಾಖಲೆಗಳು, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಹಾಗೂ ದೋಷಾರೋಪ ಪಟ್ಟಿಯ ಪ್ರತಿಯನ್ನು ಮಂಗಳವಾರ ಅಥವಾ ಬುಧವಾರದೊಳಗೆ ಸಿಬಿಐಗೆ ಒಪ್ಪಿಸುವಂತೆ ಡಿಜಿಪಿ ಹೇಳಿದ್ದಾರೆ’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಎಫ್‌ಐಆರ್ ಸಾಧ್ಯತೆ: ‘ಸುಪ್ರೀಂ ಕೋರ್ಟ್ ಆದೇಶದನ್ವಯ ತನಿಖೆ ಕೈಗೆತ್ತಿಕೊಂಡಿರುವ ಸಿಬಿಐ, ಗಣಪತಿ ಅವರಿಗೆ ಕಿರುಕುಳ ನೀಡಿದ್ದ ಆರೋಪ ಎದುರಿಸುತ್ತಿರುವ ಸಚಿವ ಕೆ.ಜೆ.ಜಾರ್ಜ್, ಗುಪ್ತಚರ ಇಲಾಖೆಯ ಡಿಜಿಪಿ ಎ.ಎಂ.ಪ್ರಸಾದ್ ಹಾಗೂ ಆಧಾರ್ ಪ್ರಾದೇಶಿಕ ಮುಖ್ಯಸ್ಥ ಐಜಿಪಿ ಪ್ರಣವ್ ಮೊಹಾಂತಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ (ಐಪಿಸಿ 304) ಆರೋಪದಡಿ ಹೊಸದಾಗಿ ಎಫ್‌ಐಆರ್ ದಾಖಲಿಸಿಕೊಳ್ಳಲಿದೆ. ಆ ನಂತರ ಅಧಿಕೃತವಾಗಿ ತನಿಖೆ ಪ್ರಾರಂಭಿಸಲಿದೆ’ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಗಣಪತಿ ಅವರು ಆತ್ಮಹತ್ಯೆ ಮಾಡಿಕೊಂಡ ದಿನ ಪ್ರಾಥಮಿಕ ಹಂತದ ತನಿಖಾ ಪ್ರಕ್ರಿಯೆ ಮುಗಿಸಿದ್ದ ಮಡಿಕೇರಿ ಪೊಲೀಸರು ಹಾಗೂ ಆ ನಂತರ ತನಿಖೆ ಕೈಗೆತ್ತಿಕೊಂಡ ಸಿಐಡಿ ಅಧಿಕಾರಿಗಳಿಗೂ ಸಿಬಿಐ ತನಿಖೆಯ ಬಿಸಿ ತಟ್ಟಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.