ADVERTISEMENT

ತಂದೆ ಬದಲು ಪುತ್ರನ ಉಪಸ್ಥಿತಿ

ಈಶ್ವರಪ್ಪ ಬ್ರಿಗೇಡ್‌ ಸದಸ್ಯತ್ವ ಪಡೆದಿಲ್ಲ: ವಿರೂಪಾಕ್ಷಪ್ಪ

​ಪ್ರಜಾವಾಣಿ ವಾರ್ತೆ
Published 24 ಮೇ 2017, 19:30 IST
Last Updated 24 ಮೇ 2017, 19:30 IST
ತಂದೆ ಬದಲು ಪುತ್ರನ ಉಪಸ್ಥಿತಿ
ತಂದೆ ಬದಲು ಪುತ್ರನ ಉಪಸ್ಥಿತಿ   
ರಾಯಚೂರು: ‘ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಸದಸ್ಯತ್ವವನ್ನು ಪಡೆದಿಲ್ಲ. ಅವರು ಪದಾಧಿಕಾರಿಯೂ ಅಲ್ಲ. ಆದ್ದರಿಂದ ಅವರು ಅಭ್ಯಾಸವರ್ಗದಲ್ಲಿ ಪಾಲ್ಗೊಳ್ಳುವುದು ಕಡ್ಡಾಯವಲ್ಲ’ ಎಂದು ಬ್ರಿಗೇಡ್‌ ರಾಜ್ಯ ಘಟಕದ ಅಧ್ಯಕ್ಷ ಕೆ.ವಿರೂಪಾಕ್ಷಪ್ಪ ಹೇಳಿದರು.
 
ನಗರದ ಹೊರವಲಯದ ಹರ್ಷಿತಾ ಗಾರ್ಡನ್‌ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ರಾಜ್ಯ ಮಟ್ಟದ ಬ್ರಿಗೇಡ್‌ ಅಭ್ಯಾಸವರ್ಗದ ಉದ್ಘಾಟನೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
 
‘ಹಿಂದುಳಿದವರು ಮತ್ತು ದಲಿತರಿಗೆ ನ್ಯಾಯ ಒದಗಿಸಲು ಬ್ರಿಗೇಡ್‌ ಸ್ಥಾಪನೆಯಾಗಿದೆ. ಯಾವುದೇ ರಾಜಕೀಯ ಪಕ್ಷಗಳ ಹಿಂದುಳಿದ ವರ್ಗಗಳ ನಾಯಕರು ಈ ಸಂಘಟನೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು’ ಎಂದು ತಿಳಿಸಿದರು.
 
‘ಮುಖ್ಯಮಂತ್ರಿ ಸಿದ್ದರಾಮಯ್ಯ  ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹಿಂದುಳಿದವರ ಮೀಸಲಾತಿ ಹೆಚ್ಚಿಸುವ ವಿಷಯ ಪ್ರಸ್ತಾಪ ಮಾಡುತ್ತಿದ್ದಾರೆ. ನಿಜಕ್ಕೂ ಅವರು ಮೀಸಲಾತಿ ವಿರೋಧಿ. ಮೀಸಲಾತಿಗೆ ಸಂಬಂಧಿಸಿದಂತೆ ಅನೇಕ ಸಲ ಅವರೊಂದಿಗೆ ನಾನು ವಾಗ್ವಾದ ನಡೆಸಿದ್ದೇನೆ’ ಎಂದು ಹೇಳಿದರು.
 
ಈಶ್ವರಪ್ಪ ಪುತ್ರ ಕಾಂತೇಶ್ ಭಾಗಿ : 
ಕೆ.ಎಸ್.ಈಶ್ವರಪ್ಪ ಅವರ ಪುತ್ರ, ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಇ. ಕಾಂತೇಶ್ ಬುಧವಾರ ಬ್ರಿಗೇಡ್‌ನ ಅಭ್ಯಾಸವರ್ಗದಲ್ಲಿ ಭಾಗವಹಿಸಿದ್ದರು. 
ಈ ಮೂಲಕ ಈಶ್ವರಪ್ಪ ಪರೋಕ್ಷವಾಗಿ ಅಭ್ಯಾಸವರ್ಗವನ್ನು ಬೆಂಬಲಿಸಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿತು.
 
‘ಬ್ರಿಗೇಡ್ ಕಾರ್ಯ ಚಟುವಟಿಕೆಯಲ್ಲಿ ಭಾಗವಹಿಸಿದರೆ ಶಿಸ್ತುಕ್ರಮ ಎದುರಿಸಬೇಕಾಗುತ್ತದೆ’ ಎಂದು ಬಿಜೆಪಿ ವರಿಷ್ಠರು ಈಚೆಗೆ  ಅವರಿಗೆ ಎಚ್ಚರಿಕೆ ನೀಡಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.