ಬೆಂಗಳೂರು: ಸಚಿವ ಸ್ಥಾನ, ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಮಂಗಳವಾರ ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರನ್ನು ಭೇಟಿ ಮಾಡಿ ಸೂಕ್ತ ಹುದ್ದೆ ಕೊಡಿಸುವಂತೆ ದುಂಬಾಲು ಬಿದ್ದರು.
ಬಸ್ ಸೇರಿದಂತೆ ವಿವಿಧ ವಾಹನಗಳಲ್ಲಿ ಬೆಂಬಲಿಗರನ್ನು ಕರೆತಂದಿದ್ದ ಮುಖಂಡರು, ಸಿಂಗ್ ಅವರ ಮುಂದೆ ತಮ್ಮ ಶಕ್ತಿಪ್ರದರ್ಶನ ಮಾಡಿದರು. ತಮ್ಮ ನಾಯಕನಿಗೆ ಮಂತ್ರಿ ಪದವಿ ನೀಡಬೇಕು ಎಂದು ಮನವಿ ಮಾಡುವ ಭಿತ್ತಿಪತ್ರ-ಗಳನ್ನು ಬೆಂಬಲಿಗರು ಕೈಯಲ್ಲಿ ಹಿಡಿದಿದ್ದರು. ಕುಮಾರಕೃಪಾ ಅತಿಥಿ ಗೃಹ ಮಂಗಳವಾರ ಅಕ್ಷರಶಃ ಕಾಂಗ್ರೆಸ್ ಕಚೇರಿಯಾಗಿ ಮಾರ್ಪಾಟಾಗಿತ್ತು. ಶಾಸಕರಾದ ಡಾ. ಮಾಲಕರೆಡ್ಡಿ, ಮಾಲೀಕಯ್ಯ ಗುತ್ತೇದಾರ, ಕೆ.ಬಿ.ಕೋಳಿವಾಡ, ಪಿ.ಎಂ.ನರೇಂದ್ರಸ್ವಾಮಿ, ಕೆ.ಎನ್.ರಾಜಣ್ಣ, ಎ.ಮಂಜು, ಪಿ.ಎಂ. ಅಶೋಕ್, ರಾಜಶೇಖರ ಪಾಟೀಲ್, ಶಿವಶಂಕರ ರೆಡ್ಡಿ ಸೇರಿದಂತೆ ಹಲವರು ಸಿಂಗ್ ಅವರನ್ನು ಭೇಟಿಯಾದರು.
ಸಚಿವರ ಭೇಟಿ: ಎಚ್.ಸಿ ಮಹದೇವಪ್ಪ, ಟಿ.ಬಿ.ಜಯಚಂದ್ರ, ಯು.ಟಿ. ಖಾದರ್, ಕೃಷ್ಣಬೈರೇಗೌಡ ಸೇರಿದಂತೆ ಹಲವು ಸಚಿವರು, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಸಂಸದ ಮುನಿಯಪ್ಪ ಮತ್ತಿತರರು ಭೇಟಿಯಾದವರಲ್ಲಿ ಸೇರಿದ್ದರು.
ಕೆಪಿಸಿಸಿ ಕಚೇರಿಯಲ್ಲೂ: ಶಾಸಕರಾದ ರಾಜಶೇಖರ ಪಾಟೀಲ್, ಆರ್.ವಿ ದೇವರಾಜ್ ಮತ್ತಿತರರು ಸಮನ್ವಯ ಸಮಿತಿ ಸಭೆ ನಡೆಯುತ್ತಿದ್ದ ಕೆಪಿಸಿಸಿ ಕಚೇರಿಗೆ ತಮ್ಮ ಬೆಂಬಲಿಗರೊಂದಿಗೆ ಬಂದು ಶಕ್ತಿ ಪ್ರದರ್ಶನ ನಡೆಸಿ ಮನವಿ ಪತ್ರ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.