ಬೆಂಗಳೂರು: ಜಪಾನ್ನಲ್ಲಿ ನಡೆಯಲಿರುವ ಸ್ಕೌಟ್ಸ್ ಅಂಡ್ ಗೈಡ್ಸ್ನ ಜಂಬೂರಿಗೆ ಆಯ್ಕೆಯಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಹಾರಾಡಿ ಶಾಲೆಯ ವಿದ್ಯಾರ್ಥಿ ದಿವಿತ್ ರೈಯ ಪ್ರಯಾಣದ ಸಂಪೂರ್ಣ ವೆಚ್ಚವನ್ನು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಭರಿಸಿದ್ದಾರೆ.
ಪರಮೇಶ್ವರ ಗೃಹ ಸಚಿವರಾಗಿದ್ದ ಸಂದರ್ಭದಲ್ಲಿ ದಿವಿತ್ ತಮ್ಮ ಶಾಲೆಯ ಶಿಕ್ಷಕಿಯೊಬ್ಬರ ವರ್ಗಾವಣೆ ತಡೆಹಿಡಿಯುವಂತೆ ಎಸ್ಎಂಎಸ್ ಸಂದೇಶ ಕಳುಹಿಸಿ ಗಮನ ಸೆಳೆದಿದ್ದ. ಆ ಸಂದೇಶಕ್ಕೆ ಹತ್ತೇ ನಿಮಿಷದಲ್ಲಿ ಕರೆ ಮಾಡಿದ ಪರಮೇಶ್ವರ, ಹುಡುಗನ ಬೇಡಿಕೆಯಂತೆ ಶಿಕ್ಷಕಿಯ ವರ್ಗಾವಣೆ ತಡೆಹಿಡಿಯುವಂತೆ ಶಿಕ್ಷಣ ಸಚಿವರಿಗೆ ಸೂಚಿಸಿ ಬೇಡಿಕೆ ಈಡೇರಿಸಿದ್ದರು.
ದಿವಿತ್ ವರ್ತನೆಯಿಂದ ಆಕರ್ಷಿತರಾಗಿದ್ದ ಪರಮೇಶ್ವರ, ಆತನ ಶಿಕ್ಷಣ ವೆಚ್ಚ ಸಂಪೂರ್ಣ ಭರಿಸುವ ಭರವಸೆ ನೀಡಿದ್ದರು. ಬಳಿಕ ಆತನ ಕೋರಿಕೆಯಂತೆ ಶಾಲಾ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ, ಶಾಲೆಯ ಅಭಿವೃದ್ದಿಗೆ ಶಾಸಕರ ನಿಧಿಯಿಂದ ₹ 10 ಲಕ್ಷ ಅನುದಾನ ನೀಡಿದ್ದರು.
ಪರಮೇಶ್ವರ ಕೂಡಾ ಬಿಡುವು ದೊರೆತಾಗ ದಿವಿತ್ಗೆ ಕರೆ ಮಾಡಿ ಮಾತನಾಡುತ್ತಿದ್ದರು. ಅಲ್ಲದೆ, ಅವರ ಮನೆಗೂ ಭೇಟಿ ನೀಡಿ ಕುಟುಂಬ ಸದಸ್ಯರ ಜೊತೆ ಕೆಲ ಸಮಯ ಕಳೆದಿದ್ದರು. ಅಲ್ಲದೆ, ಸಚಿವರ ವಿಶೇಷಾಧಿಕಾರಿಯಾಗಿದ್ದ ದಿನೇಶ್ ಗೂಳೀಗೌಡ ಕೂಡಾ ಆಗಾಗ ದಿವಿತ್ಗೆ ಕರೆ ಮಾಡಿ ಯೋಗಕ್ಷೇಮ ವಿಚಾರಿಸುತ್ತಿದ್ದರು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.