ಕೆ.ಆರ್.ಪೇಟೆ/ನಾಗಮಂಗಲ: ವಿಚಾರಣಾಧೀನ ಕೈದಿಯ ಅಪರಾಧ ಕೃತ್ಯಕ್ಕೆ ಸಹಾಯ ಮಾಡಿದ ಆರೋಪದಲ್ಲಿ ನಂಜನಗೂಡು ಕಾರಾಗೃಹದ ಜೈಲರ್ ಸಿ.ಜೆ.ರಘುಪತಿ ಎಂಬುವರನ್ನು ಮಂಡ್ಯ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಕೆ.ಆರ್.ಪೇಟೆ ವ್ಯಾಪಾರಿ ಗೋಪಾಲಸಿಂಗ್ ಅಪಹರಣ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರು ರಘುಪತಿಯನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಕೊಲೆ ಪ್ರಕರಣದಲ್ಲಿ ನಂಜನಗೂಡು ಕಾರಾಗೃಹ ಸೇರಿದ್ದ ಕೆ.ಆರ್.ಪೇಟೆಯ ಕೆ.ಎಚ್.ಅರುಣ್ ಎಂಬಾತನಿಗೆ ಮೊಬೈಲ್ ಉಪಯೋಗಿಸಲು ಅವಕಾಶ ನೀಡಿದ ಹಾಗೂ ಅನಾರೋಗ್ಯದ ನೆಪದಲ್ಲಿ ಜೈಲಿನಿಂದ ಹೊರಗೆ ಬಿಟ್ಟ ಆರೋಪ ಇವರ ಮೇಲಿದೆ.
ವ್ಯಾಪಾರಿ ಗೋಪಾಲಸಿಂಗ್ ಅವರನ್ನು ಜ. 30ರಂದು ಅಪರಹರಿಸಲಾಗಿತ್ತು. ಕಾರ್ಯಾಚರಣೆ ನಡೆಸಿದ ಪೊಲೀಸರು ಮರುದಿನ ಇವರನ್ನು ಅಪಹರಣದಿಂದ ವಿಮುಕ್ತಗೊಳಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಅವಿನಾಶ್, ರಮೇಶ್, ಕಾರ್ತಿಕ್, ಮುತ್ತುರಾಜ್, ವಿಜಿ, ಚಂದ್ರಶೇಖರ್ ಎಂಬುವರನ್ನು ಬಂಧಿಸಿದ್ದರು. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ವಿಚಾರಣಾಧೀನ ಕೈದಿ ಅರುಣ್ ಶಾಮೀಲಾಗಿದ್ದು ಬೆಳಕಿಗೆ ಬಂದಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅನಾರೋಗ್ಯದ ಕಾರಣ ನೀಡಿ ಜೈಲಿನಿಂದ ಹೊರಗೆ ಬಂದ ಅರುಣ್, ಗೋಪಾಲಸಿಂಗ್ನನ್ನು ಬಚ್ಚಿಟ್ಟಿದ್ದ ಸ್ಥಳಕ್ಕೆ ತೆರಳಿ ₹ 30 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದನು. ಇದರಂತೆ ಈತನ ಸಹಚರರ ಬ್ಯಾಂಕ್ ಖಾತೆಗೆ ವ್ಯಾಪಾರಿ ಸಂಬಂಧಿಕರು ಹಣ ಹಾಕಿದ್ದರು. ಆಸ್ಪತ್ರೆಯಿಂದ ಈ ಸ್ಥಳಕ್ಕೆ ತೆರಳಲು ಅರುಣ್ಗೆ ರಘುಪತಿ ನೆರವು ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.