ಮೈಸೂರು: ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಕೃಷಿ ಉತ್ಪಾದನಾ ವೆಚ್ಚದ ಜತೆಗೆ ಶೇ 50ರಷ್ಟು ಲಾಭ ಸೇರಿಸಿ ಬೆಂಬಲ ಬೆಲೆ ನೀಡಬೇಕು ಎಂದು ಆಗ್ರಹಿಸಲು ನವೆಂಬರ್ 20ರಂದು ನವದೆಹಲಿಯಲ್ಲಿ ‘ಕಿಸಾನ್ ಸಂಕಷ್ಟ ಮುಕ್ತಿ ಸಂಸತ್’ ಆಯೋಜಿಸಲಾಗಿದೆ ಎಂದು ಅಖಿಲ ಭಾರತ ರೈತ ಸಂಘಟನೆಗಳ ಸಮನ್ವಯ ಸಮಿತಿ ಸಂಚಾಲಕ ವಿ.ಎಂ.ಸಿಂಗ್ ತಿಳಿಸಿದರು.
ದೇಶದ 170 ರೈತ ಸಂಘಟನೆಗಳನ್ನು ಸೇರಿಸಿ ಮಹಾಸಂಘ ರಚಿಸಲಾಗಿದೆ. ಇದರ ಮೂಲಕ ‘ಕಿಸಾನ್ ಸಂಕಷ್ಟ ಮುಕ್ತಿ ಯಾತ್ರೆ’ ಆಯೋಜಿಸಲಾಗಿದೆ. ದಕ್ಷಿಣ ಭಾರತದಲ್ಲಿ ಸುಮಾರು 25 ಸಾವಿರ ಕಿ.ಮೀ ಸಂಚರಿಸಿದ್ದು, ಈಗ ಮೈಸೂರು ತಲುಪಿದೆ. ಸೆ. 23ರಂದು ಬೆಂಗಳೂರಿನ ಶಿಕ್ಷಕರ ಸದನದಲ್ಲಿ ಸಮಾಪನ ಸಮಾರಂಭ ನಡೆಯಲಿದೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ನ. 20ರಂದು ಸುಮಾರು 10 ಲಕ್ಷ ರೈತರನ್ನು ಸಂಘಟಿಸಿ ಸಮಾವೇಶ ಮಾಡಲಿದ್ದೇವೆ. ಡಾ.ಎಂ.ಎಸ್.ಸ್ವಾಮಿನಾಥ್ ವರದಿ ಜಾರಿ, ಕೃಷಿ ವೆಚ್ಚದ ಒಂದೂವರೆಪಟ್ಟು ಲಾಭ ರೈತರಿಗೆ ಸಿಗಬೇಕು ಎಂಬುದೂ ಸೇರಿದಂತೆ ಹಲವಾರು ಬೇಡಿಕೆ ಮುಂದಿಟ್ಟುಕೊಂಡು ಕೇಂದ್ರ ಸರ್ಕಾರದ ಕಿವಿಹಿಂಡುವ ಕೆಲಸ ಮಾಡಲಿದ್ದೇವೆ’ ಎಂದು ವಿವರಿಸಿದರು.
ಮಹಾರಾಷ್ಟ್ರದ ಸಂಸದ ರಾಜು ಶೆಟ್ಟಿ, ಸ್ವರಾಜ್ ಇಂಡಿಯಾ ಅಧ್ಯಕ್ಷ ಪ್ರೊ.ಯೋಗೇಂದ್ರ ಯಾದವ್, ಸಿಪಿಎಂ ಮುಖಂಡ ವಿಜುಕೃಷ್ಣನ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.