ಮಂಡ್ಯ: ‘ಪತಿ ಬೇಡ. ಪ್ರಿಯತಮ ಬೇಕು’ ಎಂದು ಗೃಹಿಣಿಯೊಬ್ಬರು ಪಟ್ಟು ಹಿಡಿದ ಘಟನೆ ನಗರದ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿ ಮಂಗಳವಾರ ನಡೆದಿದೆ.
ಕಲ್ಪನಾ ಎಂಬುವವರು ದೀಪಕ್ (ಇಬ್ಬರ ಹೆಸರನ್ನೂ ಬದಲಾಯಿಸಲಾಗಿದೆ) ಎನ್ನುವವರನ್ನು ಆರು ವರ್ಷದ ಹಿಂದೆ ಮದುವೆಯಾಗಿದ್ದರು. ನಂತರ ಮನೆಯ ಎದುರಿಗೆ ಇರುವ ಯುವಕನೊಬ್ಬನೊಂದಿಗೆ ಕಲ್ಪನಾ ಅವರ ಸ್ನೇಹ ಬೆಳೆದಿದ್ದು, ನಂತರ ಪ್ರೀತಿಗೆ ತಿರುಗಿದೆ.
ಈ ನಡುವೆ ಕಲ್ಪನಾ ತಮ್ಮ ಗಂಡನ ಮನೆಯನ್ನು ಬಿಟ್ಟು ಪ್ರಿಯಕರನ ಮನೆ ಸೇರಿಕೊಂಡಿದ್ದಾರೆ. ಇದನ್ನು ತಿಳಿದ ದೀಪಕ್ ಕಡೆಯ ಕೆಲ ಸ್ಥಳೀಯರು ಪ್ರಿಯಕರನ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ.
‘ಪ್ರಿಯಕರ ಮದುವೆಯಾಗುವುದಾಗಿ ಒಪ್ಪಿಕೊಂಡಿದ್ದರಿಂದ ಅವರ ಮನೆಗೆ ಹೋಗಿದ್ದೆ. ಈಗ ಹಿಂದೇಟು ಹಾಕುತ್ತಿದ್ದಾನೆ. ಗಂಡನೊಂದಿಗೆ ಇರಲು ಇಷ್ಟವಿಲ್ಲ. ಅವರಿಗೆ ವಿಚ್ಛೇದನ ನೀಡಿ, ನಂತರ ಪ್ರಿಯಕರನನ್ನು ಮದುವೆಯಾಗುತ್ತೇನೆ’ ಎಂದು ಪೊಲೀಸರಿಗೆ ಕಲ್ಪನಾ ಹೇಳಿಕೆ ನೀಡಿದ್ದಾರೆ.
‘ಮದುವೆಯಾದಾಗಿನಿಂದಲೂ ನೋಡಿಕೊಂಡಿದ್ದೇನೆ. ಈಗ ತನ್ನ ಪ್ರಿಯಕರನೊಂದಿಗೆ ಇರಲು ಬಿಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೆದರಿಸುತ್ತಿದ್ದಾಳೆ. ನನ್ನ ಜತೆಗೆ ಬರದಿದ್ದರೂ, ಆತ್ಮಹತ್ಯೆ ಮಾಡಿಕೊಳ್ಳುವುದು ಬೇಡ’ ಎನ್ನುತ್ತಾರೆ ಪತಿ ದೀಪಕ್.
ಪಶ್ಚಿಮ ಪೊಲೀಸ್ ಠಾಣೆಗೆ ಪತ್ನಿ, ಪತಿ ಹಾಗೂ ಪ್ರಿಯಕರನನ್ನು ಕರೆಯಿಸಿ ಮುಚ್ಚಳಿಕೆ ಬರೆಯಿಸಿಕೊಳ್ಳಲಾಗಿದೆ. ಯಾವುದೇ ದೂರು ದಾಖಲಾಗಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.