ADVERTISEMENT

ಪುರಾತತ್ವ ಇಲಾಖೆಯಲ್ಲಿ ಮಾಫಿಯಾ ಕೈವಾಡ

ನಿರ್ದೇಶಕ ಡಾ.ಆರ್.ಗೋಪಾಲ್ ಆರೋಪ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2013, 19:59 IST
Last Updated 14 ಮಾರ್ಚ್ 2013, 19:59 IST

ಮೈಸೂರು: `ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಮಾಫಿಯಾ ಕೈವಾಡದಲ್ಲಿ ನಲುಗುತ್ತಿದೆ' ಎಂದು ಇಲಾಖೆಯ ನಿರ್ದೇಶಕ ಡಾ.ಆರ್.ಗೋಪಾಲ್ ಅಸಮಾಧಾನ ಹೊರಹಾಕಿದರು.

ಶಾಸನ ನಿರ್ದೇಶನಾಲಯವು 125ನೇ ವರ್ಷಾಚರಣೆ ಅಂಗವಾಗಿ ನಗರದ ವಸ್ತುಪ್ರದರ್ಶನ ಆವರಣದಲ್ಲಿನ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಶಾಸನ ಛಾಯಾಚಿತ್ರಗಳ ಪ್ರದರ್ಶನ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

13ನೇ ಹಣಕಾಸು ಯೋಜನೆಯಡಿ ಸ್ಮಾರಕಗಳ ರಕ್ಷಣೆಗಾಗಿ ಇಲಾಖೆಗೆರೂ 100 ಕೋಟಿ  ಅನುದಾನ ಮಂಜೂರಾಗಿದೆ. ಈಗಾಗಲೇ ರಾಜ್ಯ ಸರ್ಕಾರವು ತಲಾರೂ 25 ಕೋಟಿಯಂತೆ ಎರಡು ಹಂತದಲ್ಲಿರೂ 50 ಕೋಟಿ  ಬಿಡುಗಡೆ ಮಾಡಿದೆ. ಈ ಯೋಜನೆಗೆ ಸಂಬಂಧಿಸಿದಂತೆ ಸಂರಕ್ಷಣಾ ಎಂಜಿನಿಯರ್‌ರೊಬ್ಬರ ಮನೆಯಲ್ಲಿರೂ40 ಕೋಟಿಯ ಬೋಗಸ್ ಬಿಲ್‌ಗಳನ್ನು ಸಿದ್ಧಪಡಿಸಲಾಗುತ್ತಿದೆ.ರೂ 1 ಕೋಟಿ ಅನುದಾನ ಬರುತ್ತಿದ್ದಾಗಲೇ ಯೋಜನೆಗಳು ಸಮಗ್ರವಾಗಿ ಮತ್ತು ಸಮರ್ಪಕವಾಗಿ ಅನುಷ್ಠಾನಗೊಂಡಿದ್ದವು.

ಈಗ ಇಲಾಖೆ ಮಾಫಿಯಾದವರ ಕೈಗೆ ಸಿಲುಕಿ ಅವ್ಯವಹಾರದ ಕೂಪವಾಗಿದೆ ಎಂದು ದೂರಿದರು.ಸಚಿವರಿಗೆ ಪ್ರಭಾವಿ ಅಧಿಕಾರಿಗಳುರೂ 10 ಲಕ್ಷ ಲಂಚ ನೀಡಿ ಇಲಾಖೆಯ ನಿರ್ದೇಶಕರನ್ನು ಮತ್ತೊಂದೆಡೆಗೆ ವರ್ಗಾವಣೆ ಮಾಡಿಸುತ್ತಾರೆ. ಅವ್ಯವಹಾರಗಳ ಬಗ್ಗೆ ಬಾಯಿಬಿಟ್ಟರೆ ಕೊಲೆ ಮಾಡಿಸುವುದಾಗಿ, ಲೋಕಾಯುಕ್ತ ಬಲೆಗೆ ಬೀಳಿಸುವುದಾಗಿ ಬೆದರಿಕೆ ಹಾಕುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.