ಮೈಸೂರು: ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ಹುಲಿ ರಕ್ಷಿತಾರಣ್ಯದ ಕುಂದಕೆರೆ ವಲಯದ ಲೊಕ್ಕೆರೆ ಬೀಟ್ ಅರಣ್ಯದಲ್ಲಿ ಈಚೆಗೆ ‘ಪ್ರಿನ್ಸ್’ ಹುಲಿಯು ಸಹಜವಾಗಿ ಮೃತಪಟ್ಟಿರುವುದು ದೃಢಪಟ್ಟಿದೆ. ಈ ಹುಲಿಯ ಸಾವಿನ ಸುತ್ತ ಎದ್ದಿದ್ದ ಊಹಾಪೋಗಳಿಗೆ ತೆರೆಬಿದ್ದಿದೆ.
ಹುಲಿ ಮೃತಪಟ್ಟ ನಂತರ ಅದರ ಮುಖದ ಭಾಗವನ್ನು ಕತ್ತರಿಸಿ ಕೋರೆಹಲ್ಲುಗಳನ್ನು ಅಪಹರಿಸಿದ್ದ ಮೂವರನ್ನು ತನಿಖಾ ತಂಡ ಗುರುವಾರ ಬಂಧಿಸಿದೆ.
ಚೆಲುವರಾಯನಪುರದ ಸೋಮ (35), ಬೊಮ್ಮ (41) ಹಾಗೂ ಹುಂಡಿಪುರದ ತಿನ್ನಿಸ್ವಾಮಿ (56) ಬಂಧಿತರು. ಇವರಿಂದ 3 ಕೋರೆಹಲ್ಲುಗಳನ್ನು ವಶಪಡಿಸಿಕೊಳ್ಳಲಾಗಿದೆ.
‘ಹುಲಿ ಮೃತದೇಹವನ್ನು ಹಗಲಿನಲ್ಲಿ ನೋಡಿದ ಸೋಮ ಮತ್ತು ಬೊಮ್ಮ, ರಾತ್ರಿ ವೇಳೆಗೆ ಬಂದು ಮುಖದ ಭಾಗವನ್ನು ಕತ್ತರಿಸಿ, ಅದರಿಂದ ಕೋರೆಹಲ್ಲುಗಳನ್ನು ಅಪಹರಿಸಿದ್ದರು. ನಂತರ, ಒಂದು ಕೋರೆಹಲ್ಲನ್ನು ತಿನ್ನಿಸ್ವಾಮಿಗೆ ₹ 3 ಸಾವಿರಕ್ಕೆ ಮಾರಾಟ ಮಾಡಿದ್ದರು. ಇವರಲ್ಲಿ ಸೋಮ ಹಾಗೂ ತಿನ್ನಿಸ್ವಾಮಿ ವಿರುದ್ಧ ಈಗಾಗಲೇ ಸತ್ತ ವನ್ಯಜೀವಿಗಳ ದೇಹದ ಭಾಗಗಳನ್ನು ಕತ್ತರಿಸಿ, ಮಾರಾಟ ಮಾಡಿದ ಪ್ರಕರಣಗಳು ದಾಖಲಾಗಿವೆ’ ಎಂದು ತನಿಖಾ ತಂಡದ ಮುಖ್ಯಸ್ಥ ಎಸಿಎಫ್ ಪೂವಯ್ಯ ತಿಳಿಸಿದರು.
ಏನಿದು ಘಟನೆ :13 ವರ್ಷದ ‘ಪ್ರಿನ್ಸ್’ ಎಂಬ ಹುಲಿ ಏ. 2ರಂದು ಮೃತಪಟ್ಟಿತು. ಇದರ ಮುಖದ ಭಾಗವನ್ನು ಕತ್ತರಿಸಿ, ಅದರ ಸ್ವಲ್ಪ ಭಾಗವನ್ನು ತುಂಡು ಮಾಡಲಾಗಿತ್ತು. ಮೃತದೇಹದಿಂದ ಹಲ್ಲುಗಳು ಕಾಣೆಯಾಗಿದ್ದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.