ಬೆಂಗಳೂರು: ನಿನ್ನೆ ರಾತ್ರಿಯಿಂದ ಎಡೆಬಿಡದೆ ಸುರಿದ ಮಳೆಯಿಂದಾಗಿ ನಗರದ ಹಲವು ಪ್ರದೇಶಗಳು ಜಲಾವೃತವಾಗಿವೆ. ರಸ್ತೆಗಳಲ್ಲಿ ನೀರು ತುಂಬಿರುವ ಕಾರಣ ಶುಕ್ರವಾರ ಬೆಳಗ್ಗೆ ಅಲ್ಲಲ್ಲಿ ವಿಪರೀತ ಟ್ರಾಫಿಕ್ ಜಾಮ್ ಕಂಡು ಬಂದಿತ್ತು.
ನೃಪತುಂಗ ರಸ್ತೆ, ಓಕಳಿಪುರಂ, ನಾಯಂಡಹಳ್ಳಿ, ಹೊರ ವರ್ತುಲ ರಸ್ತೆ, ಏರ್ಪೋರ್ಟ್ ರಸ್ತೆ, ಸಿಲ್ಕ್ ಬೋರ್ಡ್, ಬಿಟಿಎಂ, ಮಾರತ್ಹಳ್ಳಿ, ಬನಶಂಕರಿ, ಕನಕಪುರ ರಸ್ತೆಯಲ್ಲಿ ಟ್ರಾಫಿಕ್ ಜಾಮ್ನಿಂದಾಗಿ ಜನರು ತೊಂದರೆ ಅನುಭವಿಸಬೇಕಾಗಿ ಬಂದಿದೆ.
ಜಯನಗರ, ಹಲಸೂರು ಮೊದಲಾದ ಪ್ರದೇಶಗಳಲ್ಲಿ ಮರಗಳು ಉರುಳಿ ಬಿದ್ದಿದ್ದು , ಒಟ್ಟು 10ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ ಎಂದು ವರದಿಯಾಗಿದೆ.
ಅಪಾರ್ಟ್ಮೆಂಟ್ ಒಳಗೆ ನುಗ್ಗಿದ ನೀರು: ಇಲ್ಲಿನ ಕೋಡಿಚಿಕ್ಕನ ಹಳ್ಳಿ ಮುಖ್ಯರಸ್ತೆ ಸಂಪೂರ್ಣ ಜಲಾವೃತವಾಗಿದ್ದು ಅಪಾರ್ಟ್ಮೆಂಟ್ ಒಳಗೆ ನೀರು ನುಗ್ಗಿದೆ. ಅಪಾರ್ಟ್ಮೆಂಟ್ ನ ಗ್ರೌಂಡ್ ಪ್ಲೋರ್ನಲ್ಲಿ ವಾಸವಾಗಿದ್ದ ಜನರನ್ನು ಅಗ್ನಿಶಾಮಕ ದಳದವರು ರಕ್ಷಿಸಿದ್ದಾರೆ. ಕೆರೆಯಂತಾಗಿರುವ ರಸ್ತೆಗಳಲ್ಲಿ ವಾಹನ ಸಂಚಾರ ಸಾಧ್ಯವಾಗುತ್ತಿಲ್ಲ, ಇಲ್ಲಿನ ಜನರಿಗೆ ಬೋಟ್ ಮೂಲಕ ಸಹಾಯವನ್ನು ಒದಗಿಸಲಾಗುತ್ತಿದೆ.
ಮೀನು ಹಿಡಿಯಲು ಮುಗಿ ಬಿದ್ದ ಜನ: ಬಿಟಿಎಂ ಲೇಔಟ್ ನಲ್ಲಿ ರಸ್ತೆಯಲ್ಲಿ ಮೀನುಗಳು ಹರಿದು ಬಂದಿವೆ. ಕೆರೆ ತುಂಬಿ ಹರಿದ ಪರಿಣಾಮ ಕೆರೆ ಮೀನುಗಳು ರಸ್ತೆಗೆ ಬಂದಿದ್ದು, ಮೀನು ಹಿಡಿಯಲು ಜನ ಮುಗಿಬೀಳುತ್ತಿದ್ದ ದೃಶ್ಯ ಎಲ್ಲೆಡೆ ಕಾಣಸಿಗುತ್ತಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.