ಪಾಂಡವಪುರ: ಆಲೆಮನೆಯಲ್ಲಿ ಕಬ್ಬಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಕಬ್ಬು ಅರೆಯುವ ಕಾರ್ಯವನ್ನು ಸ್ಥಳೀಯ ಸಹಕಾರ ಸಕ್ಕರೆ ಕಾರ್ಖಾನೆ ಇನ್ನೂ ಆರಂಭಿಸಿಲ್ಲ ಎಂದು ಬೇಸತ್ತ ರೈತರೊಬ್ಬರು ತಾವು ಬೆಳೆದ 9 ತಿಂಗಳ ಕಬ್ಬನ್ನು ಕಿತ್ತೆಸೆದಿದ್ದಾರೆ.
ತಾಲ್ಲೂಕಿನ ಶಂಭೂನಹಳ್ಳಿ ಗ್ರಾಮದ ಸ್ವಾಮಿಗೌಡ ಅವರ ಪುತ್ರ ಅರುಣ್ ಕಬ್ಬನ್ನು ಕಿತ್ತೆಸೆದ ರೈತ. ಅರುಣ್ ಅವರಿಗಿರುವ 2 ಎಕರೆ ಜಮೀನಿನ ಪೈಕಿ 1 ಎಕರೆ ಜಮೀನಿನಲ್ಲಿ ಕಬ್ಬನ್ನು ಬೆಳೆದಿದ್ದರು. ತಮ್ಮ ಈ ಜಮೀನಿಗೆ ಕೊಳವೆ ಬಾವಿಯ ಪಂಪ್ಸೆಟ್ನಿಂದ ನೀರಾವರಿ ಸೌಲಭ್ಯ ಒದಗಿಸಿಕೊಂಡಿದ್ದಾರೆ.
ಕಳೆದ 9 ತಿಂಗಳ ಹಿಂದೆ ಅವರು 1 ಎಕರೆ ಜಮೀನಿನಲ್ಲಿ ಕಬ್ಬಿನ ಬಿತ್ತನೆ ಮಾಡಿದ್ದರು. ಇನ್ನು 3–4ತಿಂಗಳಲ್ಲಿ ಕಬ್ಬು ಕಟಾವಿಗೆ ಬರುತ್ತಿತ್ತು. ಆದರೆ ಕಬ್ಬಿಗೆ ಸರಿಯಾದ ಬೆಲೆ ಸಿಗುವುದು ಕಷ್ಟವಾಗಬಹುದು ಎಂದು ಯೋಚಿಸಿ ಬೆಳೆದ 9 ತಿಂಗಳ ಕಬ್ಬನ್ನು ಅವರು ಟ್ರಾಕ್ಟರ್ ಬಳಸಿ ಭಾನುವಾರ ಕಿತ್ತೆಸೆದಿದ್ದಾರೆ.
‘ಕಬ್ಬಿಗೆ ಉತ್ತಮ ಬೆಲೆ ಸಿಗಬಹುದು ಎಂಬ ಭರವಸೆಯಿಂದ 1 ಎಕರೆಯಲ್ಲಿ ಕಬ್ಬು ಬೆಳೆದೆ. ನೀರಿನ ಸೌಲಭ್ಯವಿತ್ತು. ಇದರೊಂದಿಗೆ ಉಳುಮೆ, ಬಿತ್ತನೆ, ನಾಟಿ, ರಸಾಯನಿಕ ಗೊಬ್ಬರ ಸೇರಿದಂತೆ ₹ 35 ಸಾವಿರ ಖರ್ಚಾಯಿತು. ಸದ್ಯ ಕಬ್ಬಿಗೆ ಉತ್ತಮ ಬೆಲೆಯಿಲ್ಲ. ಪಿಎಸ್ಎಸ್ಕೆ ಇನ್ನು ಪ್ರಾರಂಭಗೊಂಡಿಲ್ಲ. ಆಲೆಮನೆಯವರು ಟನ್ ಕಬ್ಬಿಗೆ ಕೇವಲ ₹400 ರಿಂದ ₹500 ದರ ನಿಗದಿ ಮಾಡುತ್ತಿದ್ದಾರೆ’ ಎಂದು ಬೇಸರದಿಂದ ನುಡಿಯುತ್ತಾರೆ ಅರುಣ್.
‘ಕಬ್ಬಿನ ಕಟಾವಿಗೆ ಇನ್ನೂ 3 ತಿಂಗಳು ಕಾದು ನಷ್ಟ ಅನುಭವಿಸುವ ಬದಲು ಈ ಅವಧಿಯಲ್ಲಿ ರಾಗಿ ಬೆಳೆಯನ್ನು ಬೆಳೆದು ಮನೆಗೂ ಬಳಸಿಕೊಂಡು ಉಳಿದ ರಾಗಿಯನ್ನು ಮಾರಾಟ ಮಾಡಿ ಲಾಭ ಪಡೆಯಬಹುದು’ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.