ಕಾರವಾರ: ಪುನರ್ವಸತಿ ಕಲ್ಪಿಸದೇ ಮನೆ ತೆರವುಗೊಳಿಸಲು ಮುಂದಾಗಿ ರುವ ಗೋವಾ ಸರ್ಕಾರದ ಕ್ರಮವನ್ನು ಖಂಡಿಸಿ ಬೈನಾ ಪ್ರದೇಶದ ಕನ್ನಡಿಗರು, ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಇದೇ 5ರೊಳಗೆ ಮನೆ ತೆರವುಗೊಳಿಸುವಂತೆ ದಕ್ಷಿಣ ಗೋವಾ ಜಿಲ್ಲಾಡಳಿತ ಬೈನಾದಲ್ಲಿರುವ 205 ಕುಟುಂಬಗಳಿಗೆ ನೋಟಿಸ್ ಜಾರಿ ಮಾಡಿತ್ತು. ಮನೆ ತೆರವುಗೊಳಿಸುವ ಮೊದಲು ಎಲ್ಲ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಬೇಕು ಎಂದು ಆಗ್ರಹಿಸಿ ಸಂತ್ರಸ್ತ ಕನ್ನಡಿಗರು ಸೋಮ ವಾರ ವಾಸ್ಕೊ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ್ದರು.
ಇದಕ್ಕೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ದೊರೆಯದಿದ್ದಾಗ, ಮಕ್ಕಳು, ಮಹಿಳೆಯರು ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ಜನರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಕೂಡ ಪ್ರತಿಭಟನೆ ನಡೆಸಿದರು.
‘ಇಪ್ಪತ್ತೈದು ವರ್ಷಗಳಿಂದ ಬೈನಾ ತೀರದಲ್ಲಿ ವಾಸಿಸುತ್ತಿದ್ದೇವೆ. ಈಗ ಏಕಾಏಕಿ ಮನೆ ತೆರವುಗೊಳಿಸಿದರೆ, ಹೆಂಡತಿ ಮಕ್ಕಳನ್ನು ಕರೆದುಕೊಂಡು ಎಲ್ಲಿಗೆ ಹೋಗಬೇಕು. ಗೋವಾ ಸರ್ಕಾರ ಶಾಶ್ವತ ಪುನರ್ವಸತಿ ಕಲ್ಪಿಸಿದ ನಂತರವೇ ಮನೆ ತೆರವುಗೊಳಿಸಲಿ’ ಎಂದು ಕನ್ನಡಿಗರು ಆಗ್ರಹಿಸಿದರು.
‘ಜಿಲ್ಲಾಧಿಕಾರಿ ಭೇಟಿ ನೀಡುವವರೆಗೂ ಕದಲುವುದಿಲ್ಲ’ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಆದರೆ, ಸಂಜೆಯಾದರೂ
ಯಾರೊಬ್ಬರೂ ಸಮಸ್ಯೆ ಆಲಿಸಲು ಬರಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.