ಬಾಳೆಹೊನ್ನೂರು: ಇಲ್ಲಿನ ರಂಭಾಪುರಿ ಪೀಠದಲ್ಲಿ ಕಳೆದ 8ರಿಂದ ಆರಂಭಗೊಂಡ ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ, ಕ್ಷೇತ್ರನಾಥ ವೀರಭದ್ರಸ್ವಾಮಿ ರಥೋತ್ಸವ ಹಾಗೂ ಪೀಠಾರೋಹಣದ ರಜತ ಮಹೋತ್ಸವ ಕಾರ್ಯಕ್ರಮ ಮಂಗಳವಾರ ಭದ್ರಾನದಿ ದಂಡೆಯಲ್ಲಿ ಸುರಗೀ ಸಮಾರಾಧನೆಯೊಂದಿಗೆ ಮುಕ್ತಾಯ ಕಂಡಿತು.
ಭದ್ರಾ ನದಿ ದಂಡೆಯಲ್ಲಿರುವ ಶಿವಲಿಂಗಕ್ಕೆ ರಂಭಾಪುರಿ ಸ್ವಾಮೀಜಿ ಪೂಜೆ ಸಲ್ಲಿಸಿ ಇಷ್ಟಲಿಂಗ ಮಹಾಪೂಜೆ ನೆರವೇರಿಸಿ ಮಾತನಾಡಿದ ಅವರು, ನಾಡಿನ ಜನ ಸಮುದಾಯದಲ್ಲಿ ಧಾರ್ಮಿಕ ಮನೋಭಾವನೆಗಳು ಪುನರುತ್ಥಾನಗೊಂಡು ದೇವರು ಮತ್ತು ಧರ್ಮದಲ್ಲಿ ನಂಬಿಕೆ ಹೆಚ್ಚಲಿ. ಸ್ವಧರ್ಮ ನಿಷ್ಠೆ ಪರಧರ್ಮ ಸಹಿಷ್ಣುತೆ ಎಲ್ಲೆಡೆ, ಎಲ್ಲರಲ್ಲಿ ಬೆಳೆದು ಶಾಂತಿ ಸದ್ಭಾವನೆಗಳು ಸಮಾಜದಲ್ಲಿ ತುಂಬಿ ತುಳುಕಲಿ ಎಂದು ಹಾರೈಸಿದರು. ಕೇದಾರ ಪೀಠದ ಭೀಮಾಶಂಕರ ಶಿವಾಚಾರ್ಯ ಭಗವತ್ಪಾದರು ಮಾತನಾಡಿ, ನೆಮ್ಮದಿಯ ಬದುಕಿಗೆ ಧರ್ಮಾಚರಣೆ ಅಗತ್ಯವಾಗಿದ್ದು, ಅಧುನಿಕತೆಯ ಹೆಸರಿನಲ್ಲಿ ಧರ್ಮ ಕಾರ್ಯಗಳು ಯಾವತ್ತೂ ನಿಲ್ಲದಿರಲಿ ಎಂದರು.
ವಾರದಿಂದ ಪೀಠದಲ್ಲಿದ್ದು ಭಕ್ತರನ್ನು ಆಶೀರ್ವದಿಸಿದ ಕೇದಾರ ಪೀಠದ ಭೀಮಾಶಂಕರ ಶಿವಾಚಾರ್ಯ ಭಗವತ್ಪಾದರನ್ನು ಬೀಳ್ಕೊಡಲಾಯಿತು.
ಭದ್ರಾನದಿಯ ದಡದಲ್ಲಿ ನಡೆದ ಸುರಗೀ ಸಮಾರಾಧನೆಯಲ್ಲಿ ಸಾವಿರಾರು ಜನ ಪಾಲ್ಗೊಂಡಿದ್ದರು. ಎಲ್ಲರಿಗೂ ನದಿ ದಂಡೆಯಲ್ಲೇ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿತ್ತು.
ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಅಧ್ಯಕ್ಷ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ, ಎಡೆಯೂರು ಕ್ಷೇತ್ರದ ರೇಣುಕಾ ಶಿವಾಚಾರ್ಯ, ಸುಳ್ಳ, ಅಬ್ಬಿಗೇರಿ, ಮಳಲಿ, ಸಂಗೋಳ್ಳಿ, ಅಬ್ಬಿಗೇರಿ, ಹೆಗ್ಗಳ್ಳಿ, ಬೇರುಗುಂಡಿ, ರಾಯಚೂರು, ಸಿಂಧನೂರು, ಕುಪ್ಪೂರು, ಕಣ್ವಕುಪ್ಪಿ, ಸಿದ್ದರಬೆಟ್ಟ, ಚಿಮ್ಮಲಗಿ, ಬಿಳಕಿ, ಬೇಬಿಮಠ, ಹಾರನಹಳ್ಳಿ, ತೆಂಡಕೆರೆ, ಬೀರೂರು ಮೊದಲಾದ ಹಲವಾರು ಶಿವಾಚಾರ್ಯರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.