ADVERTISEMENT

ಮಣ್ಣಲ್ಲಿ ಲೀನವಾದರು ಕಲಬುರ್ಗಿ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2015, 10:08 IST
Last Updated 31 ಆಗಸ್ಟ್ 2015, 10:08 IST

ಧಾರವಾಡ: ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾದ ಕನ್ನಡದ ಹಿರಿಯ ಸಾಹಿತಿ, ಸಂಶೋಧಕ, ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಎಂ.ಎಂ. ಕಲಬುರ್ಗಿ ಅವರ ಅಂತ್ಯ ಸಂಸ್ಕಾರ ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದ ರುದ್ರಭೂಮಿಯಲ್ಲಿ ಮಧ್ಯಾಹ್ನ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು. ನೆರದಿದ್ದ ಶಿಷ್ಯ ಪಡೆ, ಸಾಹಿತ್ಯಾಸಕ್ತರು, ಅಭಿಮಾನಿಗಳಿಂದ ಕೂಡಿದ ಜನಸಾಗರ ಇದಕ್ಕೆ ಸಾಕ್ಷಿಯಾಯಿತು.

ರುದ್ರಭೂಮಿಗೆ ಮಧ್ಯಾಹ್ನ 1.45ಕ್ಕೆ ಪಾರ್ಥಿವ ಶರೀರವನ್ನು ತರಲಾಯಿತು. ಮೂರು ಸುತ್ತು ಕುಶಾಲು ತೋಪು ಹಾರಿಸುವ ಮೂಲಕ ಸರ್ಕಾರಿ ಗೌರವ ಸಲ್ಲಿಸಲಾಯಿತು.

ನಿಡುಮಾಮಿಡಿ ಸ್ವಾಮೀಜಿ, ಗದಗಿನ ತೋಂಟದಾರ್ಯ ಸ್ವಾಮೀಜಿ, ಕೂಡಲ ಸಂಗಮದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹಾಗೂ ವಿವಿಧ ಮಠಾಧೀಶರು ಧಾರ್ಮಿಕ ವಿಧಿವಿಧಾನದ ಮುಂದಾಳತ್ವ ವಹಿಸಿದ್ದರು. ಕಲಬುರ್ಗಿ ಅವರ ಪತ್ನಿ ಉಮಾ ದೇವಿ ಹಾಗೂ ಮೂವರು ಪುತ್ರಿಯರು, ಪುತ್ರ ಮತ್ತು ಕಟುಂಬದವರ ಸಮ್ಮುಖದಲ್ಲಿ ಅಂತಿಮ ಸಂಸ್ಕಾರ ನೆಡೆಯಿತು.

ಇದಕ್ಕೂ ಮೊದಲು ಕರ್ನಾಟಕ ಕಲಾ ಕಾಲೇಜಿನ ಮೈದಾನದಲ್ಲಿ ಬೆಳಿಗ್ಗೆ 11ರ ವರೆಗೆ ಕಲಬುರ್ಗಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ವಿವಿಧ ಮಠಾಧೀಶರು, ಹಾಗೂ ರಾಜಕೀಯ ಮುಖಂಡರು ಅಂತಿಮ ದರ್ಶನ ಪಡೆದರು. ಬಳಿಕ ಮೆರವಣಿಗೆ ಮೂಲಕ ಕಲಬುರ್ಗಿ ಅವರ ಪಾರ್ಥಿವ ಶರೀರವನ್ನು ಕರ್ನಾಟಕ ವಿಶ್ವವಿದ್ಯಾಲಯದ ರುದ್ರಭೂಮಿಗೆ ತರಲಾಯಿತು. 

ವೈಚಾರಿಕ ಸಾಹಿತ್ಯ ಸರ್ಕಾರದ ಆಸ್ತಿ
ಅಂತ್ಯ ಕ್ರಿಯೆಯಲ್ಲಿ ಭಾಗವಹಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಮಾತನಾಡಿ, ‘ಸಂಶೋಧಕ ಎಂ.ಎಂ. ಕಲಬುರ್ಗಿ ಅವರ ಸಂಪೂರ್ಣ ಸಾಹಿತ್ಯ ಹಾಗೂ ಅವರ ವೈಚಾರಿಕ ತತ್ವಗಳು ಸರ್ಕಾರದ ಆಸ್ತಿ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.