ಚಿತ್ರದುರ್ಗ: ‘ಪ್ರಜಾಪ್ರಭುತ್ವದಲ್ಲಿ ಮತಭಿಕ್ಷೆ ಕೇಳುವವರೆಲ್ಲಾ ದಾಸಯ್ಯಗಳು, ಮತದಾರರೇ ಮಾಲೀಕರು‘ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.
ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್ ಈಶ್ವರಪ್ಪ ಶನಿವಾರ ನೀಡಿದ್ದ ಹೇಳಿಕೆ ಕುರಿತ ಪ್ರಶ್ನೆಗೆ ತಾಲ್ಲೂಕಿನ ಸಿರಿಗೆರೆಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು.
’ಈಶ್ವರಪ್ಪ ಅವರಿಗೆ ತಲೆ ಸರಿಯಿಲ್ಲ, ಬುದ್ಧಿ ಕಡಿಮೆ’ ಎಂದು ವ್ಯಂಗವಾಡಿದ ಸಿಎಂ, 'ಮತದಾರರೇ ನಾಯಕರು, ಮತ ಕೇಳುವವರು ಸೇವಕರೇ. ಅದು ಗೊತ್ತಿಲ್ಲದೇ ಏನೇನೋ ಮಾತಾಡ್ತಾರೆ' ಎಂದು ಕುಟುಕಿದರು.
'ಎಷ್ಟು ಕೇಸ್ಗಳನ್ನು ಹಾಕಿದರೂ ಅಂಜುವುದಿಲ್ಲ' ಎಂಬ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಯಡಿಯೂರಪ್ಪ ಮೇಲಿರುವ ಪ್ರಕರಣಗಳಿಗೂ ನಮಗೂ ಯಾವುದೇ ಸಂಬಂಧವಿಲ್ಲ’ ಎಂದರು.
ಕಲಬುರ್ಗಿಯಲ್ಲಿ ನಡೆಯುತ್ತಿರುವ ಲಿಂಗಾಯತ ರ್ಯಾಲಿಯಲ್ಲಿ ಸಚಿವರು ಭಾಗವಹಿಸಿರುವ ಕುರಿತು ಕೇಳಿದ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದರು: ‘ಆ ರ್ಯಾಲಿಗೂ, ಸರ್ಕಾರಕ್ಕೂ ಸಂಬಂಧವಿಲ್ಲ. ರ್ಯಾಲಿಯಲ್ಲಿ ಸಚಿವರು ಭಾಗಿಯಾಗುವುದು ಅವರ ವೈಯಕ್ತಿಕ ವಿಚಾರ. ವೈಯಕ್ತಿಕ ಅಭಿಪ್ರಾಯಕ್ಕೆ ಸರ್ಕಾರ ಅಡ್ಡಿಪಡಿಸುವುದಿಲ್ಲ. ಈ ವಿಚಾರದಲ್ಲಿ ಸಚಿವರು ಸ್ವತಂತ್ರರು’.
‘ರಾಜ್ಯದ ಬಿಜೆಪಿ ಮುಖಂಡರ ನಿಯೋಗ ಮಹದಾಯಿ ಯೋಜನೆ ಕುರಿತು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರನ್ನು ಭೇಟಿಯಾಗಿರುತ್ತಿರವುದು ಸಂತೋಷದ ಸಂಗತಿ’ ಎಂದ ಸಿದ್ದರಾಮಯ್ಯ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.