ಬೆಂಗಳೂರು: ರಾಘವೇಶ್ವರ ಭಾರತೀ ಸ್ವಾಮೀಜಿ ಅವರ ವಿರುದ್ಧ ಗಿರಿನಗರ ಠಾಣೆಯಲ್ಲಿ ಶನಿವಾರ ದಾಖಲಾದ ಮತ್ತೊಂದು ಅತ್ಯಾಚಾರ ಪ್ರಕರಣವನ್ನೂ ಸಿಐಡಿಗೆ ವಹಿಸುವ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿಗಳು ಚರ್ಚೆಯಲ್ಲಿ ತೊಡಗಿದ್ದಾರೆ.
‘ಸ್ವಾಮೀಜಿ ಅವರ ವಿರುದ್ಧ ರಾಮಕಥಾ ಗಾಯಕಿ ಪ್ರೇಮಲತಾ ದಾಖಲಿಸಿರುವ ಅತ್ಯಾಚಾರ ಪ್ರಕರಣದ ತನಿಖೆಯನ್ನು ಸಿಐಡಿ ನಡೆಸುತ್ತಿದೆ. ಹೀಗಾಗಿ ಹೊಸದಾಗಿ ದಾಖಲಾಗಿರುವ ಪ್ರಕರಣವನ್ನೂ ಸಿಐಡಿ ಸುಪರ್ದಿಗೆ ವಹಿಸುವ ಚಿಂತನೆ ಇದೆ. ಈ ಬಗ್ಗೆ ಪೊಲೀಸ್ ಕಮಿಷನರ್ ಎನ್.ಎಸ್.ಮೇಘರಿಕ್ ಅವರೊಂದಿಗೆ ಚರ್ಚಿಸಲಾಗುತ್ತಿದೆ’ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
‘ಸಿಐಡಿ ಅಧಿಕಾರಿಗಳು ಪ್ರೇಮಲತಾ ಪ್ರಕರಣದ ತನಿಖೆ ನಡೆಸುವಾಗ ಈ ಮಹಿಳೆಯನ್ನೂ ಹಲವು ಸಲ ವಿಚಾರಣೆಗೆ ಒಳಪಡಿಸಿದ್ದರು. ಅಲ್ಲದೆ, ಮಠದ ಎಲ್ಲ ಶಾಖೆಗಳಿಗೂ ತೆರಳಿ ಸಿಬ್ಬಂದಿಯ ಹೇಳಿಕೆ ದಾಖಲು ಮಾಡಿಕೊಂಡಿದ್ದರು. ಹೀಗಾಗಿ ಈ ದೂರನ್ನೂ ಅವರಿಗೆ ಒಪ್ಪಿಸುವುದು ತನಿಖೆ ದೃಷ್ಟಿಯಿಂದ ಸೂಕ್ತ’ ಎಂದು ಹಿರಿಯ ಅಧಿಕಾರಿಗಳ ಅಭಿಪ್ರಾಯ ವ್ಯಕ್ತಪಡಿಸಿದರು.
‘ಹೊಸನಗರದ ಮಠದ ಹಾಸ್ಟೆಲ್ನಲ್ಲಿ ಇದ್ದಾಗ 2006 ರಿಂದ 2012ರ ಅವಧಿಯಲ್ಲಿ ಸ್ವಾಮೀಜಿ ನನ್ನ ಮೇಲೆ ಹಲವು ಸಲ ಅತ್ಯಾಚಾರ ಎಸಗಿದ್ದಾರೆ’ ಎಂದು ಆರೋಪಿಸಿ ಉತ್ತರ ಕನ್ನಡ ಜಿಲ್ಲೆಯ 24 ವರ್ಷದ ಮಹಿಳೆ ಗಿರಿನಗರ ಠಾಣೆಗೆ ಶನಿವಾರ ದೂರು ಕೊಟ್ಟಿದ್ದರು.
ವೈದ್ಯಕೀಯ ಪರೀಕ್ಷೆ: ‘ಫಿರ್ಯಾದಿ ಮಹಿಳೆಯನ್ನು ಭಾನುವಾರ ಕಿಮ್ಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಈಗಾಗಲೇ ಅವರ ಹೇಳಿಕೆಯನ್ನು ರೆಕಾರ್ಡ್ ಮಾಡಿಕೊಳ್ಳಲಾಗಿದೆ. ವಿಚಾರಣೆಗೆ ಹಾಜರಾಗುವಂತೆ ಸ್ವಾಮೀಜಿಗೆ ಸದ್ಯದಲ್ಲೇ ನೋಟಿಸ್ ಜಾರಿಗೊಳಿಸಲಾಗುವುದು’ ಎಂದು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಕುಮಾರ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.