ಕೋಲಾರ: ರಾಜಸ್ತಾನ ಮರಳುಗಾಡಿನ ದಾರಿಯಲ್ಲಿದೆ. ಆದರೆ ಕರ್ನಾಟಕದ ಕೋಲಾರ ಜಿಲ್ಲೆಯು ದೇಶದಲ್ಲೇ ಅತಿ ಹೆಚ್ಚು ಅಂತರ್ಜಲ ಬಳಕೆ ಮತ್ತು ಜಲಸಂಪನ್ಮೂಲಗಳ ಒತ್ತುವರಿಯಿಂದ ಮರಳುಗಾಡಾಗಿ ಪರಿವರ್ತನೆಯಾಗಿದೆ ಎಂದು ರಾಜ ಸ್ತಾನದ ತರುಣ್ ಭಾರತ್ ಸಂಘದ ಜಲತಜ್ಞ ರಾಜೇಂದ್ರ ಸಿಂಗ್ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಸಂಘಟನಾ ಸಮಿತಿ: ಭಾರತ ನೀರು ಸಪ್ತಾಹ (ಹಮಾರ ಜಲ್ ಹಮಾರ ಜೀವನ್) ಕಾರ್ಯಕ್ರಮದಡಿಯಲ್ಲಿ ‘ಸುಸ್ಥಿರ ಅಭಿವೃದ್ಧಿಗಾಗಿ ನೀರಿನ ನಿರ್ವಹಣೆ’ ಕುರಿತು ಶುಕ್ರವಾರದ ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿದರು.
ರಾಜಸ್ತಾನಕ್ಕಿಂತಲೂ ಮೂರು ಪಟ್ಟು ಹೆಚ್ಚು ಮಳೆ ಬೀಳುವ, ಜನಸಂಖ್ಯೆ ಕಡಿಮೆ ಇರುವ ಕೋಲಾರ ಜಿಲ್ಲೆಯಲ್ಲಿ ಮಳೆ ನೀರು ಸದ್ಬಳಕೆ ಕುರಿತು ಶಿಸ್ತು ಇಲ್ಲವೇ ಇಲ್ಲ ಎಂದರು.
ನೀರು ಎಲ್ಲಿಂದ ಬರುತ್ತಿದೆ ಎಂದು ಜಿಲ್ಲೆಯ ಎಲ್ಲರಿಗೂ ಗೊತ್ತು. ಆದರೆ ಆ ನೀರು ಎಲ್ಲಿ ಹೋಗುತ್ತಿದೆ ಎಂಬುದು ಮಾತ್ರ ಬಹುತೇಕರಿಗೆ ತಿಳಿದೇ ಇಲ್ಲ. ಮಳೆ ಮತ್ತು ಬೆಳೆಯ ನಡುವಣ ಸಾವಯವ ಸಂಬಂಧದ ಬದಲಿಗೆ ಬೆಳೆ ಮತ್ತು ಮಾರುಕಟ್ಟೆಯ ಸಂಬಂಧಗಳ ಕಡೆಗೇ ಹೆಚ್ಚಿನ ಗಮನ ಹರಿಸಿರುವುದು ದುಃಸ್ಥಿತಿಗೆ ಕಾರಣವಾಗಿದೆ ಎಂದರು.
ರಾಜಸ್ತಾನದಲ್ಲಿ ಮಳೆಯ ಪ್ರಮಾಣ ಮತ್ತು ಅದಕ್ಕೆ ತಕ್ಕಂತೆ ಯಾವ ಬೆಳೆ ಬೆಳೆಯಬೇಕು ಎಂದು ಜನ ಯೋಚಿಸುತ್ತಾರೆ. ಆದರೆ ಜಿಲ್ಲೆ ಯಲ್ಲಿ ಅಂಥ ಲೆಕ್ಕಾಚಾರವೇ ಇಲ್ಲ ಎಂದು ವಿಷಾದಿಸಿದ ಅವರು, ಸ್ಥಳೀಯ ಮಟ್ಟದಲ್ಲಿ ಗ್ರಾಮ ಪಂಚಾಯತಿಗಳು ಅಂಥ ಲೆಕ್ಕಾಚಾರ ಮಾಡಿ ರೈತರಿಗೆ ಮಾರ್ಗದರ್ಶನ ನೀಡಿದರೆ ಸಮಸ್ಯೆ ನಿವಾರಣೆಯಾಗುತ್ತದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.