ADVERTISEMENT

ಮಹಿಳಾ ವಿ.ವಿ ಕುಲಪತಿ, ಸಿಬ್ಬಂದಿ ಅಮಾನತಿಗೆ ಆಗ್ರಹ

ಲತಾಕೃಷ್ಣಾರಾವ್, ಲೋಕಾಯುಕ್ತ ಎಸ್‌ಪಿ ವಿರುದ್ಧ ಕ್ರಮಕೈಗೊಳ್ಳಿ

​ಪ್ರಜಾವಾಣಿ ವಾರ್ತೆ
Published 26 ಜೂನ್ 2015, 14:18 IST
Last Updated 26 ಜೂನ್ 2015, 14:18 IST

ವಿಜಯಪುರ: ‘ರಾಜ್ಯ ಮಹಿಳಾ ವಿ.ವಿಯಲ್ಲಿ ರೂ1.51 ಕೋಟಿ ಮೊತ್ತದ ಅವ್ಯವಹಾರ ನಡೆದಿದ್ದು, ಇದಕ್ಕೆ ಸಂಬಂಧಿಸಿದಂತೆ ಕುಲಪತಿ ಸೇರಿದಂತೆ ಆರು ಜನರನ್ನು ತಕ್ಷಣವೇ ಅಮಾನತುಗೊಳಿಸಬೇಕು’ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಟಿ.ಜೆ.ಅಬ್ರಹಾಂ ಆಗ್ರಹಿಸಿದರು.

‘ವಿ.ವಿಯಲ್ಲಿನ ಹಗರಣಗಳ ಕುರಿತು ಸಮರ್ಪಕ ತನಿಖೆ ನಡೆಸದ ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಲತಾ ಕೃಷ್ಣಾರಾವ್‌, ವಿಜಯಪುರ ಲೋಕಾಯುಕ್ತ ಎಸ್‌.ಪಿ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಬೇಕು’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಒತ್ತಾಯಿಸಿದರು.

‘ಮಹಿಳಾ ವಿ.ವಿಯಲ್ಲಿ ನಡೆದಿರುವ ಅಕ್ರಮಗಳಿಗೆ ಸಂಬಂಧಿಸಿದಂತೆ ಇದೇ 23ರಂದು ರಾಜಭವನಕ್ಕೆ ಸಮಗ್ರ ದಾಖಲೆಗಳನ್ನು ನೀಡಲಾಗಿದೆ. 21 ದಿನಗಳ ಒಳಗೆ ಸೂಕ್ತ ಕ್ರಮ ತೆಗೆದುಕೊಳ್ಳಲು ಮುಂದಾಗದಿದ್ದರೆ, ರಾಜಭವನದ ವಿರುದ್ಧವೇ ಕಾನೂನು ಸಮರ ನಡೆಸಲಾಗುವುದು’ ಎಂದರು.

‘ವಿ.ವಿ ಆವರಣದಲ್ಲಿ, ವಿದ್ಯಾರ್ಥಿನಿಯರ ಹಾಸ್ಟೆಲ್‌ನಲ್ಲಿ ಅನುಚಿತವಾಗಿ ವರ್ತನೆ ಮಾಡಿದ್ದಾರೆ ಎಂದು ಇಬ್ಬರು ಸಿಂಡಿಕೇಟ್‌ ಸದಸ್ಯರ ವಿರುದ್ಧ ರಾಜ್ಯಪಾಲರಿಗೆ ಕುಲಪತಿಗಳು ದೂರು ನೀಡುವ ಔಚಿತ್ಯ ಏನಿತ್ತು. ಸಮೀಪದ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಬಹುದಿತ್ತಲ್ಲವೇ’ ಎಂದು ಅಬ್ರಾಹಂ ಪ್ರಶ್ನಿಸಿದರು.

‘ಈ ಪ್ರಕರಣದಲ್ಲಿ ಅವ್ಯವಹಾರ ಎಸಗಿದವರೇ ಸಾಕ್ಷಿದಾರರಾಗಿದ್ದಾರೆ. ದೂರು ದಾಖಲಿಸಿದವರೇ ಆರೋಪಿಗಳಾಗಿದ್ದಾರೆ. ಆರಂಭದಿಂದಲೂ ನಡೆದಿರುವ ಎಲ್ಲ ಘಟನಾವಳಿಗಳ ಮಾಹಿತಿಯನ್ನು ರಾಜ್ಯಪಾಲರ ಅವಗಾಹನೆಗೆ ನೀಡಲಾಗಿದೆ’ ಎಂದರು.

‘ರಾಜ್ಯದ ಎಲ್ಲ ವಿಶ್ವ ವಿದ್ಯಾಲ ಯಗಳಲ್ಲೂ ಅವ್ಯವಹಾರ ಎಗ್ಗಿಲ್ಲದೆ ನಡೆಯುತ್ತಿದ್ದು, ವಿಜಯಪುರದ ಮಹಿಳಾ ವಿ.ವಿಯಿಂದ ಅವುಗಳನ್ನು ಬಹಿರಂಗ ಗೊಳಿಸಲು ಮುಂದಾಗಿದ್ದೇನೆ. ಮುಂದಿನ ದಿನಗಳಲ್ಲಿ ಎಲ್ಲ ವಿ.ವಿಗಳ ಮಾಹಿತಿ ಕಲೆ ಹಾಕಿ ಭ್ರಷ್ಟಾಚಾರದ ವಿರುದ್ಧ ಹೋರಾಡಲಾಗುವುದು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.