ಮೈಸೂರು: ‘ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಬೆಂಗಳೂರಿನಲ್ಲಿ ನಡೆಸಿದ ಪಕ್ಷದ ಸಭೆಗೆ ನನ್ನನ್ನು ಆಹ್ವಾನಿಸದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರಂತೆ. ಮುಖ್ಯಮಂತ್ರಿಗೇನು ಕಾಂಗ್ರೆಸ್ ಅಡವಿಟ್ಟಿದ್ದೀರಾ?’ ಎಂದು ಪಕ್ಷದ ಮುಖಂಡ ಎಚ್.ವಿಶ್ವನಾಥ್ ಇಲ್ಲಿ ಗುರುವಾರ ಪ್ರಶ್ನಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ‘ಸಭೆಯ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ನನಗೆ ದೂರವಾಣಿ ಕರೆ ಮಾಡಿದರು. ನನ್ನನ್ನು ಸಭೆಗೆ ಕರೆಯದಂತೆ ಸಿದ್ದರಾಮಯ್ಯ ಅವರೇ ಸೂಚಿಸಿದ್ದರು ಎಂದು ತಿಳಿಸಿದರು. ಆಗ ಅವರಿಗೂ ಈ ಪ್ರಶ್ನೆ ಕೇಳಿದೆ’ ಎಂದರು.
‘ಜಿಲ್ಲಾ ಮಟ್ಟದ ಕಾಂಗ್ರೆಸ್ ಪದಾಧಿಕಾರಿಗಳ ಸಭೆಗೆ ನನ್ನನ್ನು ಏಕೆ ಕರೆದಿಲ್ಲ ಎಂದು ಬಾಗಿಲ ಬಳಿ ನಿಂತು ಗಲಾಟೆ ಮಾಡಬೇಕೇ? ಹಿರಿಯ ಮುಖಂಡರನ್ನು ಗೌರವದಿಂದ ನಡೆಸಿಕೊಳ್ಳುವುದು ಅವರ ಜವಾಬ್ದಾರಿ’ ಎಂದು ಅವರು ಹರಿಹಾಯ್ದರು.