ADVERTISEMENT

‘ಮೋದಿ ದಲಿತರ ಮಾತು ಆಲಿಸಲಿ’

​ಪ್ರಜಾವಾಣಿ ವಾರ್ತೆ
Published 22 ಜುಲೈ 2017, 19:30 IST
Last Updated 22 ಜುಲೈ 2017, 19:30 IST
ಅಮೆರಿಕದ ಸಾಮಾಜಿಕ  ಹೋರಾಟಗಾರ ಮಾರ್ಟಿನ್‌ ಲೂಥರ್‌ ಕಿಂಗ್‌–3 ಅಂಬೇಡ್ಕರ್‌ ಪ್ರತಿಮೆ ಹೊತ್ತ ಗೋಳದ ಮುಂದೆ ಛಾಯಾಗ್ರಾಹಕರಿಗೆ ಫೋಸ್‌ ನೀಡಿದರು  ಚಿತ್ರ– ಎಂ.ಎಸ್‌. ಮಂಜುನಾಥ್‌
ಅಮೆರಿಕದ ಸಾಮಾಜಿಕ ಹೋರಾಟಗಾರ ಮಾರ್ಟಿನ್‌ ಲೂಥರ್‌ ಕಿಂಗ್‌–3 ಅಂಬೇಡ್ಕರ್‌ ಪ್ರತಿಮೆ ಹೊತ್ತ ಗೋಳದ ಮುಂದೆ ಛಾಯಾಗ್ರಾಹಕರಿಗೆ ಫೋಸ್‌ ನೀಡಿದರು ಚಿತ್ರ– ಎಂ.ಎಸ್‌. ಮಂಜುನಾಥ್‌   

ಬೆಂಗಳೂರು: ‘ಪ್ರಧಾನಿ ನರೇಂದ್ರ ಮೋದಿ ಅವರು ದಮನಿತರ  ಮಾತುಗಳನ್ನು ಆಲಿಸಬೇಕು’ ಎಂದು ಅಮೆರಿಕದ ಸಾಮಾಜಿಕ ಕಾರ್ಯಕರ್ತ ಮಾರ್ಟಿನ್‌ ಲೂಥರ್‌ ಕಿಂಗ್‌–3 ಹೇಳಿದ್ದಾರೆ.

ಶನಿವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಮೋದಿ ಕುರಿತು ಕೊಂಚ ಮೃದು ಮಾತುಗಳನ್ನು ಆಡಿದರು.
ಸಮ್ಮೇಳನದ ಉದ್ಘಾಟನೆ ಸಮಾರಂಭದಲ್ಲಿ ‘ಮೋದಿ ಮತ್ತು  ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌   ಧೋರಣೆ ಒಂದೇ’ ಎಂದು ಟೀಕಿಸಿದ್ದ ಮಾರ್ಟಿನ್‌ ಲೂಥರ್‌ ಕಿಂಗ್‌– 3, ಶನಿವಾರ ‘ಮೋದಿ ಕಾರ್ಯಶೈಲಿ ಬದಲಿಸಿಕೊಳ್ಳಬೇಕು’ ಎಂದು ತಿಳಿಸಿದರು.

ಭಾರತದ ದಲಿತರು ಮತ್ತು ಅಮೆರಿಕದ  ಕಪ್ಪು ಜನರ ನೋವು ಒಂದೇ. ಅಮರಿಕದಲ್ಲಿ ಕಪ್ಪು ಜನರು ಹೋರಾಟ ನಡೆಸಿದಾಗ ಕಪ್ಪುಜನರ ಬಗ್ಗೆ ಅನುಕಂಪ ಹೊಂದಿದ್ದ ಸಾಕಷ್ಟು ಬಿಳಿಯರು ಬೆಂಬಲ ನೀಡಿದ್ದರು. ದಲಿತರು ಮೇಲ್ಜಾತಿಗಳ ಜನರನ್ನೂ ಸೇರಿಸಿಕೊಂಡು ಹೋರಾಟ ಮಾಡಿದರೆ ಅವರಲ್ಲೂ ಪರಿವರ್ತನೆ ಕಾಣಬಹುದು ಎಂದು ಸಲಹೆ ನೀಡಿದರು.

ADVERTISEMENT

ಯಾವುದೇ ಹೋರಾಟ ಅಹಿಂಸಾತ್ಮಕವಾಗಿರಬೇಕು. ಇದಕ್ಕೆ ಮಹಾತ್ಮ ಗಾಂಧಿ ನೇತೃತ್ವದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟ, ಅಮೆರಿಕದಲ್ಲಿ  ಮಾರ್ಟಿನ್‌ ಲೂಥರ್‌ಕಿಂಗ್‌ ನೇತೃತ್ವದಲ್ಲಿ ನಡೆದ ಕಪ್ಪು ಜನರ ಹೋರಾಟಗಳೇ ಸಾಕ್ಷಿ ಎಂದು ಸ್ಮರಿಸಿದರು.

‘ಅವನೊಂದು ಹೊಡೆದರೆ, ನಾನೊಂದು ಹೊಡೆಯುತ್ತೇನೆ ಎಂಬ ಧೋರಣೆ ಸರಿಯಲ್ಲ. ಇದರಿಂದ ಹಿಂಸೆ ಹೆಚ್ಚುತ್ತದೆ. ಉಗ್ರಗಾಮಿಗಳು ಅಮೆರಿಕ ಅವಳಿ ಗೋಪುರಗಳ ಮೇಲೆ ದಾಳಿ ಮಾಡಿದ ನಂತರ, ಹಲವು ರಾಷ್ಟ್ರಗಳಲ್ಲಿ ಯುದ್ಧ ಸಾರಲಾಯಿತು. ಅದು ಅನವಶ್ಯಕವಾಗಿತ್ತು. ಉಗ್ರರ ದಾಳಿಗೆ  ಕಾರಣಗಳು ಏನು ಎಂಬುದನ್ನು ತಿಳಿದುಕೊಳ್ಳುವ ಮೂಲಕ ಅದರ ಪರಿಹಾರಕ್ಕೆ ಪ್ರಯತ್ನಿಸುವುದು ಸರಿಯಾದ ಮಾರ್ಗ’ ಎಂದು ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.