ಮೈಸೂರು: ರಾಮಚಂದ್ರಾಪುರ ಮಠಾಧೀಶ ರಾಘವೇಶ್ವರ ಭಾರತೀ ಸ್ವಾಮೀಜಿ ಅವರನ್ನು ಅಶ್ಲೀಲವಾಗಿ ಚಿತ್ರಿಸಿದ್ದ ನಕಲಿ ಸಿ.ಡಿ. ಪ್ರಕರಣವನ್ನು ಸರ್ಕಾರ ಹಿಂಪಡೆಯುವ ಆದೇಶವನ್ನು ರದ್ದುಗೊಳಿಸದಿದ್ದರೆ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ರಾಮಚಂದ್ರಾಪುರ ಮಠದ ಮೈಸೂರು ವಲಯದ ಅಧ್ಯಕ್ಷ ವಿದ್ವಾನ್ ಕೃಷ್ಣ ಮಂಜಭಟ್ಟ ಎಚ್ಚರಿಕೆ ನೀಡಿದರು.
2010ರಲ್ಲಿ ಸ್ವಾಮೀಜಿ ರೀತಿಯಲ್ಲಿ ವೇಷ ತೊಟ್ಟು ಅಶ್ಲೀಲ ಚಿತ್ರ ತಯಾರಿಸಿ ಜನರಿಗೆ ವಿತರಿಸಿದ್ದರು. ಇವರ ವಿರುದ್ಧ ದೂರು ದಾಖಲಾಗಿ ಆರೋಪಿಗಳನ್ನು ಬಂಧಿಸಿ, ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಇದರ ವಿರುದ್ಧ ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿತ್ತು ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಹೀಗಿದ್ದರೂ, ಸರ್ಕಾರವೇ ಪ್ರಕರಣ ವಾಪಸ್ ತೆಗೆದುಕೊಂಡು ಆರೋಪಿಗಳ ಪರ ನಿಂತು ರಕ್ಷಿಸುತ್ತಿರುವುದು ಸಮಾಜಘಾತುಕ ಶಕ್ತಿಗಳಿಗೆ ಬೆಂಬಲ ನೀಡಿದಂತಾಗುತ್ತದೆ ಎಂದು ಅವರು ಶುಕ್ರವಾರ ತಿಳಿಸಿದರು. ಪದಾಧಿಕಾರಿಗಳಾದ ನಾರಾಯಣ ಭಟ್, ರಾಕೇಶ್ ಭಟ್, ಗಾಯತ್ರಿ ಗಿರಿಜಾ ಶಂಕರ್, ಕೆ. ಶ್ರೀಕಾಂತ್, ವಿ.ಕೆ. ಭಟ್ಟ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.